ಬಳ್ಳಾರಿ: ರಕ್ತದಾನ ಪವಿತ್ರವಾದುದು. ರಕ್ತದಾನ ಮಾಡಿ ಜೀವ ಉಳಿಸಿ ಎನ್ನುವ ಅಂಶವನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ವಿಮ್ಸ ನಿರ್ದೇಶಕ ಡಾ. ದೇವಾನಂದ ಅವರು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಿಮ್ಸ ಹಾಗೂ ಜಿಂದಾಲ್ ಇವರ ಸಂಯುಕ್ತಾಶ್ರಯದಲ್ಲಿ ಜಿಂದಾಲ್ನಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾೀಡುವ ದಾನಿಗಳಿಗೂ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ರಕ್ತದಾನ ಮಾಡುವುದರಿಂದ ಯಾವುದೇ ನ್ಯೂನತೆಗಳಾಗುವುದಿಲ್ಲ. ಪ್ರತಿಯೊಬ್ಬ ಆರೋಗ್ಯವಂತ ವಯಸ್ಕರು ರಕ್ತದಾನ ಮಾಡಬಹುದು. ಗ್ರಾಮೀಣ ಪ್ರದೇಶದಲ್ಲಿ ರಕ್ತದಾನ ಮಾಡಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಂಸ್ಥೆಗಳು, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರಿ ನೌಕರರು ಕಡ್ಡಾಯವಾಗಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು. ಜೀವ ಉಳಿಸುವ ಸಂದರ್ಭ ಎಲ್ಲರಿಗೂ ಎಲ್ಲ ಸಂದರ್ಭದಲ್ಲಿಯೂ ಸಿಗುವುದಿಲ್ಲ. ರಕ್ತದಾನದಿಂದ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ವ್ಯಕ್ತಿಗಳು ಅದರ ಪ್ರಯೋಜನ ಪಡೆಯುವರು. ಅದೇ ಇನ್ನೊಂದು ಜೀವವನ್ನು ಉಳಿಸಲು ಸಹಾಯಕ. ಅಲ್ಲದೆ ಬೇರೆಯವರಿಗೂ ಸ್ಫೂರ್ತಿ ಆಗುವುದು ಎಂದು ಅವರು ಹೇಳಿದರು.
ಜಿಂದಾಲ್ನ ಆಕ್ಸಿಜನ್ ವಿಂಗ್ನ ನಿರ್ದೇಶಕ ಸೀನಿ ಕಾಂಜಿವರಂ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕ ಅನಿರುದ್ಧ ಕ್ಯಾರಟ್, ಪೋಲಾ ರಾಧಾಕೃಷ್ಣ ಉಪಸ್ಥಿತರಿದ್ದರು.
ಅನಿಲಕುಮಾರ್ ಸ್ವಾಗತಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ನಾಗರಾಜ್ ರಾವ್ ನಿರೂಪಿಸಿದರು. ದಾಸ್ ಅವರು ವಂದಿಸಿದರು. ಶಿಬಿರದಲ್ಲಿ ಜಿಂದಾಲ್ನ 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.