ನವದೆಹಲಿ(ಪಿಟಿಐ): ಸಗಟು ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರ ಜನವರಿಯಲ್ಲಿ ಅಲ್ಪ ಇಳಿಕೆ ಕಂಡಿದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಶೇ 8.43ರಿಂದ ಶೇ 8.23ಕ್ಕೆ ಇಳಿದಿದೆ.
ಸಗಟು ಸೂಚ್ಯಂಕ ದರಕ್ಕೆ ಶೇ 65 ರಷ್ಟು ಕೊಡುಗೆ ನೀಡುವ ತಯಾರಿಕಾ ಕ್ಷೇತ್ರ ಜನವರಿಯಲ್ಲಿ ಶೇ 3.75ರಷ್ಟು ವೃದ್ಧಿ ಕಂಡಿದೆ. ಈ ಅವಧಿಯಲ್ಲಿ ಗೋಧಿ, ಬೇಳೆಕಾಳು, ಸಕ್ಕರೆ ಧಾರಣೆ ಸಾಮಾನ್ಯ ಮಟ್ಟಕ್ಕೆ ಇಳಿದಿದೆ. ಆದರೆ, ತರಕಾರಿ, ಹಣ್ಣುಗಳು, ಮೀನು ಮತ್ತು ಮಾಂಸದ ಬೆಲೆಗಳು ತುಟ್ಟಿಯಾಗಿಯೇ ಮುಂದುವರೆದಿವೆ.
ಪ್ರಮುಖವಾಗಿ ಸಕ್ಕರೆ ಶೇ 15ರಷ್ಟು, ಬೇಳೆಕಾಳು ಶೇ 13ರಷ್ಟು, ಗೋಧಿ ಶೇ 5 ಮತ್ತು ಆಲೂಗಡ್ಡೆಯ ಧಾರಣೆ ಶೇ 1ರಷ್ಟು ಕುಸಿದಿರುವುದು ಜನಸಾಮಾನ್ಯರಿಗೆ ಅಲ್ಪ ಸಮಾಧಾನ ತಂದಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ತರಕಾರಿ ಬೆಲೆ ಶೇ 65ರಷ್ಟು ಹಾಗೂ ಹಣ್ಣುಗಳ ಧಾರಣೆ ಶೇ 15ರಷ್ಟು ಹೆಚ್ಚಾಗಿದೆ. ಮಾಂಸ ಮತ್ತು ಮೀನು ಶೇ 15ರಷ್ಟು ದುಬಾರಿಯಾಗಿವೆ.ಒಟ್ಟಾರೆ ಪ್ರಾಥಮಿಕ ಸರಕುಗಳ ಬೆಲೆ ಶೇ 17ರಷ್ಟು ಹೆಚ್ಚಿದ್ದು, ಆಹಾರ ಪದಾರ್ಥಗಳು ಶೇ 16ರಷ್ಟು ಏರಿಕೆ ಕಂಡಿವೆ.
ಆಹಾರೇತರ ವಸ್ತುಗಳಾದ ನಾರಿನ ಉತ್ಪನ್ನಗಳು ಶೇ 48ರಷ್ಟು ತುಟ್ಟಿಯಾಗಿವೆ. ಇದೇ ಅವಧಿಯಲ್ಲಿ ತೈಲ ಮತ್ತು ಇಂಧನ ಬೆಲೆ ಶೇ 11ರಷ್ಟು, ಪೆಟ್ರೋಲ್ ಶೇ 27ರಷ್ಟು ದುಬಾರಿಯಾಗಿವೆ ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ 7 ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಆದರೂ, ನಿರೀಕ್ಷಿತ ಮಟ್ಟದ ನಿಯಂತ್ರಣ ಸಾಧ್ಯವಾಗಿಲ್ಲ. ಕಳೆದ ಡಿಸೆಂಬರ್ನಲ್ಲಿ ವಾರ್ಷಿಕ ಆಹಾರ ಹಣದುಬ್ಬರ ದರ ಶೇ 18.32ರಷ್ಟಾಗಿದ್ದು, ಈಗಲೂ ಮೇಲ್ಮಟ್ಟದಲ್ಲೇ ಮುಂದುವರೆದಿವೆ.
ಆಹಾರ ಪಧಾರ್ಥಗಳ ಪೂರೈಕೆಯಲ್ಲಿ ಸುಧಾರಣೆ ಆಗಿರುವುದರಿಂದ ಹಣದುಬ್ಬರ ದರವು ಕ್ರಮೇಣ ಕುಸಿಯಲಿದೆ. ಈರುಳ್ಳಿ ಬೆಲೆ ಈಗಾಗಲೇ ಸಹಜ ಸ್ಥಿತಿಗೆ ಬಂದಿದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.