ಪಿರಿಯಾಪಟ್ಟಣ: ಯಾವುದೇ ಕಾರಣಕ್ಕೆ ಹತಾಶೆಗೊಂಡು ಮದ್ಯ ದಾಸರಾದರೆ, ಸಮಾಜದಲ್ಲಿ ಮತ್ತಷ್ಟು ಅಗೌರವ ಬರುತ್ತದೆ ಹೊರತು ಬೇರೇನೂ ಸಾಧ್ಯವಿಲ್ಲ. ಆದ್ದರಿಂದ ಸೋಲು ಅಥವಾ ಹತಾಶೆಗೊಂಡವರು ಮದ್ಯ ಸೇವನೆಗೆ ಮುಂದಾಗಬಾರದು ಎಂದು ಬೆಟ್ಟದಪುರ ವಿರಕ್ತ ಮಠದ ಚನ್ನವೀರದೇಶೀಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮದ್ಯ ಪಾನದಿಂದ ಕುಟುಂಬ ನಾಶವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಜನಜಾಗೃತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ಮದ್ಯ ಸೇವನೆಯ ಚಟಕ್ಕೆ ಬಿದ್ದು ಜೀನವನ್ನು ನರಕ ಮಾಡಿಕೊಳ್ಳುತ್ತಿದ್ದ 28,000 ಕ್ಕೂ ಹೆಚ್ಚು ಜನರಿಗೆ ಶಿಬಿರ ಏರ್ಪಡಿಸಲಾಗಿದೆ. ಈ ಮೂಲಕ ಅವರ ಕುಟುಂಬಗಳನ್ನು ಹಸನುಗೊಳಿಸಿದ ಕೀರ್ತಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.
ಶಿಕ್ಷಣ ತಜ್ಞ ಮತ್ತು ನಿವೃತ್ತ ಜಂಟಿ ನಿರ್ದೇಶಕ ವಸಂತ್ರಾಜೇಅರಸ್ ಮಾತನಾಡಿ, ವೀರೇಂದ್ರ ಹೆಗ್ಗಡೆ ಯವರು ಸಾಮಾಜಿಕ ಕಳಕಳಿಯಿಂದ ನಡೆಸುತ್ತಿರುವ ಸೇವೆಯನ್ನು ಗಮನಿಸಿ ಕೇಂದ್ರ ಸರ್ಕಾರ `ಭಾರತ ರತ್ನ~ ಪ್ರಶಸ್ತಿ ನೀಡಬೇಕು ಎಂದು ಕೋರಿದರು.
ಶಿಬಿರದಲ್ಲಿ 102 ಮಂದಿ ಭಾಗವಹಿಸಿದ್ದರು. ಸಮಾರಂಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿ.ಜಿ. ಅಪ್ಪಾಜಿಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿಲೋಕೇಶ್, ಟಿ.ವಿ. ವೆಂಕಟೇಶ್, ಪ್ರಭಾಶಂಕರ್, ಶಿವಪ್ರಸಾದ್, ದೇವದಾಸ್, ರಘು ಚಂದ್ರಶೆಟ್ಟಿ ಭಾಗವಹಿಸಿದ್ದರು.