ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ 30ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವು ದಿ.ಮಹಾದೇವಪ್ಪ ರಾಂಪುರೆ ಬಯಲು ರಂಗಮಂದಿರದಲ್ಲಿ ಸೋಮವಾರ ಜರುಗಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾಜಿ ಸಚಿವ ಭೀಮಣ್ಣ ಖಂಡ್ರೆ, ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ಅಮರನಾಥ ಗುಪ್ತಾ, ವಿದ್ವಾನ್ ಎಂ.ಶಿವಕುಮಾರಸ್ವಾಮಿ, ಮುರುಘರಾಜೇಂದ್ರ ಸ್ವಾಮೀಜಿ, ಗಂಗಾಧರ ಶಿವಾಚಾರ್ಯ, ಕಲಾವಿದ ವಿ.ಟಿ.ಕಾಳೆ, ವಿಠ್ಠಲ ದೊಡ್ಡಮನಿ, ಉರ್ದು ಕವಿ ಎಂ.ಎ.ವಾಹಬ್ ಅಂದಲೀಬ್, ಸಚಿವ ಎ. ನಾರಾಯಣಸ್ವಾಮಿ ಸೇರಿದಂತೆ 10 ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸಚಿವ ಎ. ನಾರಾಯಣಸ್ವಾಮಿ ಗೈರುಹಾಜರಾದರು.
ಚಿನ್ನದ ಪದಕ ಪಡೆದವರ ಪೈಕಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿರುವುದು ವಿಶೇಷವಾಗಿತ್ತು. ಸ್ನಾತಕೋತ್ತರ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಹಾಗೂ 53 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 77 ವಿದ್ಯಾರ್ಥಿಗಳು 157 ಚಿನ್ನದ ಪದಕ ಗಳಿಸಿದ್ದಾರೆ. ಕಲಾ ನಿಕಾಯದಲ್ಲಿ 18, ಸಮಾಜ ವಿಜ್ಞಾನ ನಿಕಾಯದಲ್ಲಿ 14, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ 27, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯದಲ್ಲಿ 10, ಶಿಕ್ಷಣ ಮತ್ತು ಕಾನೂನು ನಿಕಾಯದಲ್ಲಿ ತಲಾ 4 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ. ಎಂಬಿಎ ವಿದ್ಯಾರ್ಥಿನಿ ಅನಿಶಾ ಕ್ರಿಸ್ಟಿನಾ ಅತಿ ಹೆಚ್ಚು (8) ಚಿನ್ನದ ಪದಕ ಪಡೆದ ಹೆಗ್ಗಳಿಕೆಗೆ ಪಾತ್ರರಾದರು.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವಿಶ್ರಾಂತ ಸಹಾಯಕ ಮಹಾ ನಿರ್ದೇಶಕ ಡಾ. ಪ್ರೇಮನಾಥ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ, ಕುಲಸಚಿವರಾದ ಪ್ರೊ. ಎಸ್.ಎಲ್. ಹಿರೇಮಠ, ಡಾ. ಡಿ.ಬಿ. ನಾಯಕ ವೇದಿಕೆಯಲ್ಲಿದ್ದರು.