ಹಾನಗಲ್ಲ: ಪ್ರಸ್ತುತ ರಾಜ್ಯ ಬಜೆಟ್ನಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಅವಶ್ಯಕ ಹಣ ತೆಗೆದಿರಿಸಲು ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ನ ಹಾನಗಲ್ಲ ಘಟಕದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ ಕಾರ್ಯಾಲಯಕ್ಕೆ ತೆರಳಿ ತಹಸೀಲ್ದಾರ ಎಸ್.ಎನ್.ರುದ್ರೇಶ ಅವರಿಗೆ ಮನವಿ ಅರ್ಪಿಸಿದರು.
ಹಮಾಲಿ ಕಾರ್ಮಿಕರು ಸೇರಿದಂತೆ ಇತರೆ ಅಸಂಘಟಿತ ಕಾರ್ಮಿಕರಿಗಾಗಿ ರಚಿಸಿದ ‘ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ-2009’ ಮುಖಾಂತರ ಸೌಲಭ್ಯಗಳನ್ನು ನೀಡಲು ಪ್ರಸ್ತುತ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಹಮಾಲರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಂಡಳಿ ಮೂಲಕ ಗುರುತಿನ ಚೀಟಿ, ಪಿಂಚಣಿ, ವಸತಿ ಸೌಲಭ್ಯ, ವೈದ್ಯಕೀಯ ನೆರವು, ಮರಣ ಪರಿಹಾರ, ಅಪಘಾತಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರದ ರಾಷ್ಟ್ರೀಯ ಸ್ವಾಸ್ಥ ಭೀಮಾ, ಜನಶ್ರೀ ಭೀಮಾ ಯೋಜನೆಗಳನ್ನು ಹಮಾಲಿ ಕಾರ್ಮಿಕರಿಗಾಗಿ ಜಾರಿಗೊಳಿಸಬೇಕು. ಹಮಾಲಿ ಕಾರ್ಮಿಕರ ಬೆವರಿನ ಹಣವನ್ನು ಖಾಸಗಿ ಕಂಪನಿಗಳಿಗೆ ಜೂಜಾಡಲು ನೀಡುವ ಮೋಸದ ‘ಸ್ವಾವಲಂಬನೆ’ ಎಂಬ ನೂತನ ಪಿಂಚಣಿ ಯೋಜನೆ ಕೈಬಿಟ್ಟು ಮುಪ್ಪಿನ ಕಾಲದಲ್ಲಿ ಸಹಾಯ ನೀಡುವಂತಹ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಮತ್ತು ಎಲ್ಲ ಹಮಾಲಿ ಕಾರ್ಮಿಕರಿಗೂ ಕಾರ್ಮಿಕ ಕಾನೂನುಗಳು ಕಡ್ಡಾಯವಾಗಿ ಅನ್ವಯವಾಗಬೇಕು ಎಂದು ಕಾರ್ಮಿಕರು ಮನವಿಯಲ್ಲಿ ತಿಳಿಸಿದ್ದಾರೆ.
ಹಮಾಲಿ ಕಾರ್ಮಿಕರ ತಾಲ್ಲೂಕು ಘಟಕದ ಅಧ್ಯಕ್ಷ ನೂರಹ್ಮದ ಖೇಣಿ, ಅಣ್ಣಪ್ಪ ಚಿಕ್ಕಣ್ಣನವರ, ನಜೀರಹ್ಮದ ಧಾರವಾಡ, ಪದಾಧಿಕಾರಿಗಳಾದ ಅಜೀಜಸಾಬ ಅಣ್ಣಿಗೇರಿ, ಹೊನಪ್ಪ ಕುರುಬರ, ನಜೀರಸಾಬ ಅಂದಲಗಿ, ಮಹಾಂತೇಶಪ್ಪ ಹರಿಜನ, ಭಾಷಾಸಾಬ ಹೊಂಬಳಿ, ಮುನ್ನಾ ಖಿಲ್ಲೇದಾರ, ಸತ್ತಾರಸಾಬ ಮಕಾಶಿ, ಅಶೋಕ ಅಳ್ಳೊಳ್ಳಿ, ದಿವಾನಸಾಬ ಮಕಾಂದಾರ, ಗುರುಸಿದ್ಧಪ್ಪ ಕಂಕನೂರ, ಶಿವಪ್ಪ ದಡ್ಡಿಕೊಪ್ಪ ಮುಂತಾದವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.