ಬೀದರ್: ಯುವತಿಯನ್ನು ಚುಡಾಯಿಸಿದ ಆರೋಪದಲ್ಲಿ 13 ವರ್ಷದ ಬಾಲಕನೊಬ್ಬನ ಮೇಲೆ ತೀವ್ರ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮೈಲೂರಿನ ನಿವಾಸಿಗಳು ಗುರುವಾರ ನಗರದ ಗಾಂಧಿಗಂಜ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ರಾಹುಲ್ ರಮೇಶ್ ಎಂಬವನ ಮೇಲೆ ತೀವ್ರ ಹಲ್ಲೆ ನಡೆಸಲಾಗಿದ್ದು, ಸದ್ಯ ಸೋಲಾಪುರ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ ಎಂದು ನಿವಾಸಿಗಳು ಆರೋಪಿಸಿದರು. ಯೇಸುದಾಸ ಎಂಬಾತ ಹಾಗೂ ಆತನ ಸಹೋದರಿ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ದೂರು ನೀಡಿದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ದೂರಿದರು.
ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ದತ್ತಾತ್ರಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಅರುಣ ಕುದರೆ, ಪ್ರಮುಖರಾದ ಶಿವಕುಮಾರ್ ನೀಲಿಕಟ್ಟಿ, ಸತ್ಯಮ್ಮ ರಮೇಶ್, ನಾಗಮ್ಮ ಪುಂಡಲಿಕರಾವ್, ಸುನಿಲ್ ಒಂಟೆ, ರಾಜು ಭಾವಿಕಟ್ಟಿ, ಶಾಲಿವಾನ್ ಬಡಿಗೇರ, ಓಂಪ್ರಕಾಶ್ ಭಾವಿಕಟ್ಟಿ ಪಾಲ್ಗೊಂಡಿದ್ದರು.