ಮುದ್ದೇಬಿಹಾಳ: ಹಳೆಯ ಕಾಲದಲ್ಲಿದ್ದ ಕಳ್ಳು ಬಳ್ಳಿಯ ಸಂಬಂಧಗಳು ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ ಎಂದು ಹಿರಿಯ ಸಾಹಿತಿ ರಂಗನಾಥ ಅಕ್ಕಲಕೋಟ ಹೇಳಿದರು.
ಅವರು ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಲಿಂ. ಗುರುಬಸವಾರ್ಯ ಮಠ ಮಾಸ್ತರ, ಮಾತೋಶ್ರೀ ಗುರುಸಂಗಮ್ಮ ಕೋರಿ, ಶಿವಸಂಗಪ್ಪ ಪಾಟೀಲ ಇವರ ಸ್ಮರಣಾರ್ಥ ಪಟ್ಟಣದ ಎಂ.ಜಿ.ಎಂ.ಕೆ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರ ಮೇಲಿನ ಭಕ್ತಿ, ಗುರು ಹಿರಿಯರ ಬಗ್ಗೆ ಇದ್ದ ಗೌರವ, ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ ಮನೋಭಾವವನ್ನೇ ಹಳ್ಳಿಯ ಜನತೆ ಬಾಯಿಂದ ಬಾಯಿಗೆ ಹಾಡುತ್ತ ಬಂದರು. ಅದುವೇ ಜನಪದ ಸಾಹಿತ್ಯವಾಯಿತು. ಜನಪದ ಸಾಹಿತ್ಯದಲ್ಲಿ ಪೂರ್ವ ಕಾಲದ ಜನರ ಗಟ್ಟಿತನ, ಸಂಸ್ಕೃತಿ ಮೇಳೈಸಿವೆ. ಗ್ರಾಮೀಣ ಪ್ರದೇಶದಲ್ಲಿ ಇವತ್ತಿಗೂ ಸಹೋದರ ಭಾವ, ಕೊಡು ತೆಗೆದುಕೋ ಎಂಬ ಸಂಬಂಧಗಳು ಜೀವಂತವಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ವರ್ತಕ ವಿ.ಕೆ. ದೇಶಪಾಂಡೆ ಮಾತನಾಡಿದರು. ಪ್ರಭು ಕಡಿ, ಬಸನಗೌಡ ಪಾಟೀಲ, ಮನೋಹರ ನಾಯನೇಗಲಿ, ಪಿ.ಎಸ್. ಮಸ್ಕಿ, ಆರ್.ಡಿ. ಬಿರಾದಾರ ಉಪಸ್ಥಿತರಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾಂತಾಬಾಯಿ ನೂಲಿಕರ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಕನ್ನೂರ, ಎಂ.ಟಿ. ಪಾಟೀಲ, ಬಿ.ವಿ. ಕೋರಿ, ರುದ್ರೇಶ ಕಿತ್ತೂರ, ಎನ್.ಬಿ. ಕುಂಬಾರ, ಬಸಮ್ಮ ಗಂಗನಳ್ಳಿ ಉಪಸ್ಥಿತರಿದ್ದರು.
ಬಸವರಾಜ ನಾಲತವಾಡ ಸ್ವಾಗತಿಸಿದರು. ಎಸ್.ಬಿ. ಬಂಗಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ನಿಧಿ ದಾನಿಗಳನ್ನು ಬಾಪುಗೌಡ ಪಾಟೀಲ ಪರಿಚಯಿಸಿದರು. ಪ್ರಾಚಾರ್ಯ ಎಸ್.ಕೆ. ಹರನಾಳ ನಿರೂಪಿಸಿದರು.