ಬೆಂಗಳೂರು: `ಕುವೆಂಪು ಅವರ ದಾರ್ಶನಿಕತೆಯನ್ನು ಹಸಿರಿನ ಪರಿಭಾಷೆಯಲ್ಲಿ ಹೇಳುವ ಪ್ರಯತ್ನ ಕವಿಶೈಲದ ಕವಿತೆಗಳು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು. ನಗರದಲ್ಲಿ ಇತ್ತೀಚೆಗೆ ನಡೆದ ಬೇಲೂರು ರಘುನಂದನ್ ಅವರ `ಕವಿಶೈಲದ ಕವಿತೆಗಳು~ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, `ಹಸಿರಿನ ಪರಿಭಾಷೆಯನ್ನು ಸಮರ್ಥವಾಗಿ ಬಳಸಿರುವ ಕವಿ ಬೇಲೂರು ರಘುನಂದನ್ ಅವರ ಎಲ್ಲ ಕವಿತೆಗಳಲ್ಲೂ ಕುವೆಂಪು ಚಿತ್ರಣ ಹಾಗೂ ಹಸಿರು ಮೈವೆತ್ತಿದೆ~ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್, `ಕುವೆಂಪು ಅವರನ್ನು ಒಂದು ಪರಿಮಿತಿಯೊಳಗೆ ಹಿಡಿದಿಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಸಂಕಲನದ ವಸ್ತುವಿನಲ್ಲಿ ಮಹತ್ವವಿದೆ. ಕುವೆಂಪು ಅವರ ಬಗ್ಗೆ ಕವಿ ಸೃಷ್ಟಿಸಿರುವ ಉಪಮೆಗಳು ಹೊಸದಾಗಿವೆ. ಕಾವ್ಯದ ಭಾಷೆಗೆ ಕವಿ ಇನ್ನಷ್ಟು ಶ್ರಮ ಪಡಬೇಕು~ ಎಂದರು.
ಹಿರಿಯ ವರ್ಣಚಿತ್ರ ಕಲಾವಿದ ಎಂ.ಬಿ.ಪಾಟೀಲ್ ಮಾತನಾಡಿ, `ಕವಿ ಮತ್ತು ಕಲಾವಿದನ ಸಂಯೋಜನೆ ಕವಿಶೈಲದಲ್ಲಿ ಅಪೂರ್ವವಾಗಿ ಮೂಡಿಬಂದಿದೆ. ಕುವೆಂಪು ಹಾಗೂ ಕೆ.ಟಿ.ಶಿವಪ್ರಸಾದ್ ಕವಿಶೈಲದಲ್ಲಿ ಸಂಯೋಜನೆಗೊಂಡಂತೆ ಬೇಲೂರು ರಘುನಂದನ್ ಹಾಗೂ ಮುನಿಯಪ್ಪ ಸಂಕಲನದ ಮೂಲಕ ಎರಡು ಕಲೆಗಳ ಸಂಯೋಜನೆಯನ್ನು ಉತ್ತಮವಾಗಿ ಸಾಧಿಸಿದ್ದಾರೆ~ ಎಂದು ನುಡಿದರು.
ಕುವೆಂಪು ಕವಿತೆಗಳ ಗೀತ ಗಾಯನ ಹಾಗೂ ವರ್ಣಚಿತ್ರ ಕಲಾವಿದ ಮುನಿಯಪ್ಪ ಅವರ ಚಿತ್ರಗಳ ಪ್ರದರ್ಶನ ನಡೆಯಿತು. ಹಿರಿಯ ಸಂಶೋಧಕ ಡಾ.ಹಂಪಾ ನಾಗರಾಜಯ್ಯ, ಸಾಹಿತಿ ಡಾ.ಮಳಲಿ ವಸಂತಕುಮಾರ್, ಸಂಕಲನದ ಕರ್ತೃ ಬೇಲೂರು ರಘುನಂದನ್ ಉಪಸ್ಥಿತರಿದ್ದರು.