ಕಾರವಾರ: ಉತ್ತರ ಕನ್ನಡ ಜಿಲ್ಲೆ ಎಂದರೆ ಹಸಿರುಹೊದ್ದ ಗುಡ್ಡಬೆಟ್ಟಗಳು, ಕರಾವಳಿ ತೀರ ಪ್ರದೇಶಗಳು, ಜಲಪಾತಗಳು ಹಾಗೂ ಬಯಲು ಪ್ರದೇಶ. ಇಲ್ಲಿ ಎಲ್ಲವೂ ವೈವಿಧ್ಯಮಯ.
ಮಳೆ ಶುರುವಾಯಿತೆಂದರೆ ಜಿಲ್ಲೆಯಲ್ಲಿ ಜಲಪಾತಗಳದ್ದೆ ದರ್ಬಾರು. ಮಳೆಗಾಲದಲ್ಲಿ ಪಶ್ಚಿಮಘಟ್ಟದಲ್ಲಿ ಹುಟ್ಟಿ ಧುಮುಕುವ ಜಲಧಾರೆಗಳಿಗೆ ಲೆಕ್ಕವೇ ಇಲ್ಲ. ಒಂದಕ್ಕಿಂತ ಇನ್ನೊಂದು ಭಿನ್ನ. ಕಾರವಾರ ಸಮೀಪದ `ವಜ್ರ~ ಜಲಪಾತ ಪಶ್ಚಿಮಘಟ್ಟದಲ್ಲಿರುವ ಸಾಲು ಜಲಪಾತಗಳಲ್ಲಿ ಒಂದಾಗಿದೆ.
ಕಾರವಾರದಿಂದ ಕದ್ರಾದಿಂದ ಜೋಯಿಡಾಕ್ಕೆ ಹೋಗುವ ಮಾರ್ಗದಲ್ಲಿ ಅಣಶಿಯಿಂದ ಸುಮಾರು ಹತ್ತು ಕಿ.ಮೀ. ದೂರ ಈ ಜಲಪಾತವಿದೆ. ಸುಮಾರು ಎಪ್ಪತ್ತು ಅಡಿ ಎತ್ತರದಿಂದ ಹಂತಹಂತವಾಗಿ ತಳಕುತ್ತ ಬಳುಕುತ್ತ ಹಾಲ್ನೊರೆಯಂತೆ ಧುಮುಕುವ ಜಲಪಾತ ನೋಡುಗರ ಕಣ್ಮನ ಸೆಳೆಯುವುದು.
ಮೇಲಿನಿಂದ ಮೂರು ಕವಲುಗಳಾಗಿ ಟಿಸಿಲೊಡೆದು ಕೊನೆಯಲ್ಲಿ ಒಂದೆಡೆ ಸೇರಿದಾಗ ಅದರ ರೌದ್ರ ಶಬ್ದ ಕೇಳಿದರೆ ಎದೆ ಡವಡವ ಎನ್ನುತ್ತದೆ. ರಸ್ತೆಯ ಪಕ್ಕದಲ್ಲಿ ನಿಂತು ಜಲಪಾತದ ಸೊಬಗನ್ನು ಸವಿಯಬಹುದು. ಡಿಸೆಂಬರ್ವರೆಗೂ ಪ್ರವಾಸಿಗರು ಈ ಜಲಪಾತದ ಸೊಬಗನ್ನು ಸವಿಯಬಹುದಾಗಿದೆ.