ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ರಸ್ತೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದ್ದು, ವಾಹನ ಸವಾರರು ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಗುಣಮಟ್ಟದ ರಸ್ತೆ ನಿರ್ಮಿಸುವುದು ನಗರಸಭೆಯ ಹೊಣೆ. ರಸ್ತೆ ಹದ ಗೆಟ್ಟಿದ್ದರೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತದೆ. ಇದರಿಂದ ಸಾವುನೋವು ಸಂಭವಿಸುವುದು ಹೆಚ್ಚು. ಸಮರ್ಪ ಕವಾಗಿ ಸಂಚಾರ ನಿಯಮಗಳ ಅನುಷ್ಠಾನಕ್ಕೂ ತಲೆನೋವು ತಪ್ಪಿದ್ದಲ್ಲ. ಆದರೆ, ಈ ಅರಿವು ಸ್ಥಳೀಯ ಆಡಳಿತ ಇಲ್ಲದಂತಾಗಿದೆ ಎನ್ನುವುದು ನಾಗರಿಕರ ದೂರು.
ಜಿಲ್ಲಾ ಕೇಂದ್ರದಲ್ಲಿ ನಗರಸಭೆಗೆ ಸೇರಿರುವ ಒಟ್ಟು 106 ಕಿ.ಮೀ. ಉದ್ದದ ರಸ್ತೆ ಇದೆ. ಮೊದಲ ಹಂತ ದಲ್ಲಿ ಬಿಡುಗಡೆಯಾದ ಮುಖ್ಯ ಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯ ಅನುದಾನದಡಿ ಕೊಂಚಮಟ್ಟಿಗೆ ರಸ್ತೆಗಳು ಡಾಂಬರು ದರ್ಶನ ಕಂಡವು. ಆದರೆ, ಪರಿಪೂರ್ಣವಾಗಿ ಅಭಿವೃದ್ಧಿ ಕಾಣಲಿಲ್ಲ.
ಈ ನಡುವೆ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಸದಸ್ಯರೇ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ್ದು, ಉಂಟು. ಕೊನೆಗೆ, ಮೂರನೇ ವ್ಯಕ್ತಿಯಿಂದ ರಸ್ತೆ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಗುತ್ತಿಗೆದಾರರಿಗೂ ಬಾಕಿ ಹಣವನ್ನು ಬಿಡುಗಡೆ ಮಾಡಲಾಯಿತು.
ಪ್ರಸ್ತುತ ಈ ಯೋಜನೆಯಡಿ ವಿವಿಧ ವಾರ್ಡ್ಗಳಲ್ಲಿ ನಿರ್ಮಿಸಿರುವ ರಸ್ತೆಗಳು ಹದಗೆಟ್ಟಿವೆ. ಸಂಚಾರಕ್ಕೂ ಕಿರಿಕಿರಿ ಉಂಟಾಗುತ್ತಿದ್ದು, ವಾಹನ ಸವಾರರು, ನಾಗರಿಕರು ಹಿಡಿಶಾಪ ಹಾಕುವುದು ಮುಂದುವರಿದಿದೆ.
ಕಳೆದ ಮೂರು ತಿಂಗಳ ಹಿಂದೆ ಹೊರಭಾಗದ ಬಡಾವಣೆಗಳ ರಸ್ತೆ ಗಳಿಗೆ ಡಾಂಬರು ಹಾಕಲಾಗಿದೆ. ಈಗ ಜಿಲ್ಲಾ ಕೇಂದ್ರದ ವ್ಯಾಪ್ತಿ ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭ ಗೊಂಡಿದೆ. ಆದರೆ, ನಗರಸಭೆಯಿಂದ ಪೂರ್ವ ಯೋಜನೆ ರೂಪಿಸದಿರುವ ಪರಿ ಣಾಮ ರಸ್ತೆಗಳಿಗೆ ಡಾಂಬರು ಹಾಕಲು ವ್ಯಯಿಸಿದ ಹಣ ಈಗ ವ್ಯರ್ಥವಾ ಗುತ್ತಿದೆ ಎಂಬುದು ನಾಗರಿಕರ ದೂರು.
ಮತ್ತೊಂದೆಡೆ ನಾಗರಿಕರು ಕೂಡ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ, ವಿದ್ಯುತ್ ಸಂಪರ್ಕ ಪಡೆಯಲು ರಸ್ತೆ ಅಗೆಯುವುದು ಸಾಮಾನ್ಯವಾಗಿದೆ. ರಸ್ತೆ ಅಗೆಯಲು ನಗರಸಭೆಯ ಅನುಮತಿ ಪಡೆಯ ಬೇಕಿದೆ. ನಂತರ, ಅಗೆದ ಸ್ಥಳದ ದುರಸ್ತಿ ಯನ್ನೂ ನಾಗರಿಕರೇ ಮಾಡಬೇಕಿದೆ. ಆದರೆ, ಈ ಬಗ್ಗೆ ಸ್ಥಳೀಯ ಆಡಳಿತ ಪರಿಶೀಲಿಸಿ ಸಂಬಂಧಪಟ್ಟವರಿಂದ ನಿಗದಿತ ಶುಲ್ಕ ವಸೂಲಿ ಮಾಡಲು ಮುಂದಾಗಿಲ್ಲ. ರಸ್ತೆ ಅಗೆಯುವ ಪ್ರವೃತ್ತಿಯೂ ಹೆಚ್ಚುತ್ತಿರುವುದರಿಂದ ರಸ್ತೆಗಳು ಹದಗೆಡುತ್ತಿವೆ.
24 ಕೋಟಿ ರೂ ಪ್ರಸ್ತಾವ
ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಎರಡನೇ ಹಂತದಲ್ಲಿ 35 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ 24 ಕೋಟಿ ರೂ ವೆಚ್ಚದ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿಲ್ಲ.
`ಗುಣಮಟ್ಟದ ರಸ್ತೆ ನಿರ್ಮಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿ. ಕೆಲವೆಡೆ ಗುಂಡಿಗಳು ಸೃಷ್ಟಿಯಾಗಿದ್ದರೂ ದುರಸ್ತಿಪಡಿಸಿಲ್ಲ. ಪೈಪ್ಲೈನ್ ಅಳವಡಿಕೆಗೆ ರಸ್ತೆ ಅಗೆಯುವುದು ಎಗ್ಗಿಲ್ಲದೆ ನಡೆಯುತ್ತಿದೆ. ನಂತರ, ರಸ್ತೆ ದುರಸ್ತಿಗೆ ಸಂಬಂಧಪಟ್ಟ ಮನೆ ಮಾಲೀಕರು ಮುಂದಾಗುವುದಿಲ್ಲ.
ಇದರಿಂದ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನಗತ್ಯವಾಗಿ ರಸ್ತೆ ಅಗೆಯುವವರ ವಿರುದ್ಧ ನಗರಸಭೆ ಆಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು~ ಎಂದು ಒತ್ತಾಯಿಸುತ್ತಾರೆ ಚಾಲಕ ಮಹೇಶ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.