ದಾವಣಗೆರೆ: ಜಿಲ್ಲೆಯ ವಿವಿಧ ಹಾಸ್ಟೆಲ್ಗಳ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಶುಕ್ರವಾರ ಜಿಲ್ಲಾ ಪಂಚಾಯ್ತಿ ಮುಂಭಾಗ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಹೊರಗುತ್ತಿಗೆ ನೌಕರರಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಪದೇ ಪದೇ ಈ ಸಮಸ್ಯೆ ಬಗ್ಗೆ ಅಧಿಕರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ವೇತನ ಪಾವತಿ ಮಾಡದ್ದರಿಂದ ಕನಿಷ್ಠ ವೇತನ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ರಾಷ್ಟ್ರೀಕೃತ ಬ್ಯಾಂಕ್ ಖಾತೆಗೆ ವೇತನ ಪಾವತಿಸಬೇಕು. ಏಪ್ರಿಲ್ 2012ರಿಂದ ತುಟ್ಟಿಭತ್ಯೆ ನೀಡಬೇಕು. ಭವಿಷ್ಯನಿಧಿ, ಕಾರ್ಮಿಕ ವಿಮಾ ಸೌಲಭ್ಯ ಪಡೆಯಲು ವೇತನ ಮೊತ್ತ ಬ್ಯಾಂಕ್ಗೆ ತುಂಬಿರುವುದಕ್ಕೆ ದಾಖಲೆ ನೀಡಬೇಕು. ಕಾರ್ಮಿಕರಿಗೆ ವಾರದ ರಜೆ ಸೌಕರ್ಯ ನೀಡಬೇಕು. ಇಎಸ್ಐ ಕಾರ್ಡ್ಗಳನ್ನು ಕೂಡಲೇ ವಿತರಿಸಬೇಕು. ಪ್ರತಿ ತಿಂಗಳು 5ರ ಒಳಗೆ ತಪ್ಪದೇ ವೇತನ ಪಾವತಿಸಲು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೈದಾಳ್ ಮಂಜುನಾಥ್, ಸಿ.ಜಿ. ವಸಂತ್ ಕುಮಾರ್, ಹಾಲೇಶ್ ನಾಯ್ಕ, ಶಶಿಕುಮಾರ್, ನಾಗರಾಜ್ ಕಾರಿಗನೂರು, ರವಿಕುಮಾರ್, ರೂಪಾ, ಸುದಮ್ಮ, ಸರೋಜಮ್ಮ, ಬಸವರಾಜ್ ಚನ್ನಗಿರಿ ಭಾಗವಹಿಸಿದ್ದರು.