ಬೆಂಗಳೂರು: `ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಸ್ಥಾನವನ್ನು ಕಲ್ಪಿಸಬೇಕು' ಎಂದು ನವದೆಹಲಿಯ ಅಖಿಲ ಭಾರತ ಪ.ಜಾತಿ ಮತ್ತು ಪ.ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕರ ಕಲ್ಯಾಣ ಸಂಘಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎನ್. ಹನುಮಂತಪ್ಪ ಅವರು ಒತ್ತಾಯಿಸಿದರು.
ಸೋಮವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಸಮುದಾಯಗಳ ಜನರ ಏಳಿಗೆಗೆ ರಾಜಕೀಯ ಅಧಿಕಾರ ಅಗತ್ಯ. ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಸ್ಥಾನಗಳನ್ನು ಕಲ್ಪಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಇದನ್ನು ತಡೆಯಬೇಕಾದರೆ ಮಹಿಳೆಗೆ ಮೀಸಲಾತಿಯನ್ನು ನೀಡುವ ಮೂಲಕ ಅವರನ್ನು ಶಕ್ತರನ್ನಾಗಿಸಿ ದೌರ್ಜನ್ಯವನ್ನು ಎದುರಿಸುವಂತೆ ಮಾಡಬೇಕಾಗಿದೆ ಎಂದರು.