ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 70ನೇ ಹುಟ್ಟುಹಬ್ಬವನ್ನು ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳು ಸೇರಿ ಇದೇ 27ರಂದು ನಗರದಲ್ಲಿ ಆಚರಿಸಲು ನಿರ್ಧರಿಸಿವೆ.
ಸಂಸದ ಪಿ.ಸಿ.ಮೋಹನ್, ಎಂ.ಡಿ.ಲಕ್ಷ್ಮೀನಾರಾಯಣ ಸೇರಿದಂತೆ ಇತರರು ಬುಧವಾರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಪಕ್ಷಾತೀತವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಎಲ್ಲ ಮುಖಂಡರು ಭಾಗವಹಿಸಲಿದ್ದಾರೆ. ರೈಲ್ವೆ ನಿಲ್ದಾಣ ಸಮೀಪ ದ ಬೆಲ್ ಕನ್ವೆನ್ಷನ್ ಹಾಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಸಿ. ಮೋಹನ್ `ಪ್ರಜಾವಾಣಿ~ಗೆ ತಿಳಿಸಿದರು.
ಹಿಂದುಳಿದ ವರ್ಗಗಳ ಸಲುವಾಗಿ ಯಡಿಯೂರಪ್ಪ ಉತ್ತಮ ಬಜೆಟ್ ಮಂಡಿಸಿದ್ದು, ಆ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸುತ್ತಿರುವುದಾಗಿ ವಿವರಿಸಿದರು. ಅವರ ಬೆಂಬಲಿಗರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲು ಈ ಮುಂಚೆ ನಿರ್ಧರಿಸಿದ್ದರು. ಆದರೆ, ಕೆಲವರ ಅಪಸ್ವರದಿಂದಾಗಿ ಸರಳವಾಗಿ ಆಚರಿಸಿಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.