ಶ್ರೀನಗರ(ಪಿಟಿಐ): ತೀವ್ರ ಹಿಮಪಾತದ ಪರಿಣಾಮ ಕಾಶ್ಮೀರದಲ್ಲಿ ಚಳಿ ಮುಂದುವರಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿ ಕನಿಷ್ಟ ಉಷ್ಣಾಂಶ -5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವುದರಿಂದ ಸ್ಥಳೀಯ ಆಂತರಿಕ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಆಸ್ಪತ್ರೆಗಳಿಗೆ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಪೂರೈಸುವಂತೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆದೇಶಿಸಿದ್ದಾರೆ.
ಶ್ರೀನಗರ ಹಾಗೂ ಜಮ್ಮು ರಾಷ್ಟ್ರೀಯ ಹೆದ್ದಾರಿ ಮೂರನೇ ದಿನವೂ ಮುಚ್ಚಲಾಗಿದೆ. ರಸ್ತೆಗಳ ಮೇಲೆ ಬಿದ್ದಿರುವ ಹಿಮವನ್ನು ಸ್ವಚ್ಛಗೊಳಿಸಲಾಗಿದ್ದರೂ ರಸ್ತೆಗಳು ಜಾರುತ್ತಿವೆ. ಆದ್ದರಿಂದ ವಾಹನ ಸಂಚಾರ ಯೋಗ್ಯವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದಿಂದ ಇತರ ಪ್ರದೇಶಗಳನ್ನು ಸೇರಿಸಲು ಇರುವ ಏಕೈಕ ಮಾರ್ಗ ಜವಾಹರ ಹೆದ್ದಾರಿ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಮತ್ತೆ ಹಿಮಪಾತ ಉಂಟಾಗಿದ್ದರಿಂದ 294 ಕಿ.ಮಿ ಉದ್ದದ ರಸ್ತೆ ತೆರವುಗೊಳಿಸುವ ಕಾರ್ಯ ತಡವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ನೀರು ಸರಬರಾಜು ಕೊಳವೆಯಲ್ಲಿನ ನೀರು ಹಾಗೂ ದಲ್ ಸರೋವರದ ನೀರು ಬಹುತೇಕ ಮಂಜುಗಟ್ಟಿವೆ.