ಮೈಸೂರು: ಸ್ವಾತಂತ್ರ್ಯ ಯೋಧ, ಪತ್ರಕರ್ತ ಕೆ.ರಾಮಣ್ಣ (80) ಅವರು ಸೋಮವಾರ ಮಧ್ಯಾಹ್ನ ಇಲ್ಲಿನ ಸ್ವಗೃಹದಲ್ಲಿ ನಿಧನರಾದರು. ಇವರಿಗೆ ಪತ್ನಿ ಸುಮಿತ್ರಾ, ಪುತ್ರಿಯರಾದ ಅಂಜಲಿ ರಾಮಣ್ಣ, ಆಶಾ ವಿಶ್ವನಾಥ್ ಇದ್ದಾರೆ.
ಚಾಮರಾಜನಗರದಲ್ಲಿ ಹುಟ್ಟಿದ ಇವರು, ಮೈಸೂರಿಗೆ ಬಂದು ನೆಲೆಸಿದ್ದರು. ಹಿರಿಯ ಸಹೋದರ ಮತ್ತು ಸ್ವಾತಂತ್ರ್ಯ ಯೋಧ ಎಚ್.ಕೆ.ಕುಮಾರಸ್ವಾಮಿ ಆರಂಭಿಸಿದ 'ಅರುಣ' ದಿನಪತ್ರಿಕೆಯನ್ನು ಆರು ದಶಕಗಳ ಕಾಲ ನಡೆಸಿ 2002 ನೇ ಸಾಲಿನಲ್ಲಿ ನಿಲ್ಲಿಸಿದ್ದರು. ಪತ್ರಿಕಾರಂಗ, ಸಹಕಾರಿ ಕ್ಷೇತ್ರ, ಸೇವಾದಳ, ವಯಸ್ಕರ ಶಿಕ್ಷಣ, ರಂಗಭೂಮಿ, ಸಿನಿಮಾ, ಟಿವಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ದುಡಿದಿದ್ದರು. `ಸೋಲಿಲ್ಲದ ಸರದಾರರು, ಜಗವ ಸುತ್ತಿ ನಲಿ, ಜನರ ನೋಡಿ ಕಲಿ, ನಮ್ಮ ಪತ್ರಿಕೋದ್ಯಮ, ಕನ್ನಡ ರಂಗಭೂಮಿ' ಮತ್ತಿತರ ಪುಸ್ತಕ ಬರೆದಿದ್ದಾರೆ.
ರಂಗಭೂಮಿಯಲ್ಲಿ 6 ದಶಕಗಳ ಕಾಲ ದುಡಿದ ಇವರು 'ಮಾತಾ ಅಸೋಸಿಯೇಷನ್' ನಟನ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ನಟನೆ ಜೊತೆಗೆ ನಾಟಕಗಳನ್ನು ನಿರ್ದೇಶಿಸಿದ್ದರು. `ನೆನಪುಗಳ ಸಚಿತ್ರ ವರದಿ' ಆತ್ಮಚರಿತ್ರೆ ಮುದ್ರಣಕ್ಕೆ ಸಿದ್ಧವಾಗಿದೆ.ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಮಂಗಳವಾರ (ಡಿ.25) ಬೆಳಿಗ್ಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ.