ಗದಗ: ಉದ್ಯೋಗ ರಂಗದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಯುವ ಉದ್ಯಮಿಗಳಿಗೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಜಗದೀಶ ಶೆಟ್ಟರ ಹೇಳಿದರು.
ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಭಾನುವಾರ ನಡೆದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಾಪಾರ ಮತ್ತು ಉದ್ದಿಮೆ ಸ್ಥಾಪನೆ ಮಾಡುವ ಸಂದರ್ಭದಲ್ಲಿ ನಷ್ಟ-ಕಷ್ಟಗಳು ಸಹಜ. ಆದ್ದರಿಂದ ಯುವ ಉದ್ಯಮಿಗಳು ಎದೆ ಗುಂದದೆ ವ್ಯವಹಾರದ ವಹಿವಾಟು ಹೆಚ್ಚಿಸಲು ಹಿರಿಯರ ಅನು ಭವವನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಬೇಕು ಎಂದರು.
ಅಭಿವೃದ್ಧಿ ಹಿನ್ನಡೆ: ಜೀವಮಾನದ ಸಾಧನೆಗಾಗಿ ಪ್ರಶಸ್ತಿಯನ್ನು ಪಡೆದ ಶಾಸಕ ವಿಜಯ ಸಂಕೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಪೋಸ್ಕೊ ಕಂಪೆನಿ ಸ್ಥಾಪನೆ ಕೈತಪ್ಪಿರುವುದರಿಂದ ಗದಗ ಜಿಲ್ಲೆ ಐವತ್ತು ವರ್ಷಗಳ ಹಿಂದಕ್ಕೆ ಹೋದಂತಾಗಿದೆ. ಪೋಸ್ಕೊ ಕಂಪೆನಿ ಸ್ಥಾಪನೆಯಾಗಿದ್ದರೆ, ಹಲವಾರು ಪೂರಕ ಉದ್ದಿಮೆಗ ಬೆಳೆಯುತ್ತಿದ್ದವು ಎಂದರು.
ಇದೇ ಸಂದರ್ಭದಲ್ಲಿ ಶ್ರೇಷ್ಠ ಉದ್ದಿಮೆದಾರ ಪ್ರಶಸ್ತಿಯನ್ನು ಲಕ್ಷ್ಮೇಶ್ವರದ ಶಿವಲಿಂಗಯ್ಯ ಗಡ್ಡದೇವರಮಠ, ಗದುಗಿನ ಸಂಗಪ್ಪ ಗುಡಿಮನಿ, ನರಗುಂದದ ಅಂದಾನಪ್ಪ ಜಿನಗಾ ಅವರಿಗೆ ನೀಡಲಾಯಿತು. ಗಜೇಂದ್ರಗಡದ ರಿಕಬ್ಚಂದ್ ಬಾಗಮಾರ, ಗದುಗಿನ ಧೀರಜ್ ಜೈನ್, ಮುಂಡರಗಿಯ ನಾರಾಯಣ ಇಲ್ಲೂರ ಶೇಷ್ಠ ವರ್ತಕ ಪ್ರಶಸ್ತಿಗೆ ಭಾಜನಾರದರು.
ಶಾಸಕ ಶ್ರೀಶೈಲಪ್ಪ ಬಿದರೂರ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಂಗಮೇಶ ದುಂದೂರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ, ರಾಜಶೇಖರ ಶಿರೂರ, ಡಿ.ಡಿ. ಪುಣೇಕರ ಹಾಜರಿದ್ದರು.
ಆನಂದ ಪೋತ್ನಿಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ಬಾಳಿಹಳ್ಳಿಮಠ ನಿರೂಪಿಸಿದರು. ನಿರ್ಮಲಕುಮಾರ ಶಹಾ ವಂದಿಸಿದರು.