ಹಿರೀಸಾವೆ: ಸರ್ಕಾರಿ ಶಾಲೆಗಳಿಗೆ ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ದಿನಗಳಲ್ಲಿ ಮಾತಾ ಅಮೃತಾನಂದಮಯಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲಿದೆ.
100 ಮನೆಗಳಿರುವ ಬಡಾವಣೆಯಲ್ಲಿ ಮಕ್ಕಳು ಶಾಲೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಬೇಕಿತ್ತು. ಅರ್ಧ ಕಿ.ಮೀ. ದೂರದಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿದ್ದರೂ, ಹಲವು ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿ ಉಳಿದವು. ಸಮಸ್ಯೆ ಅರಿತ ಇಲಾಖೆ 2007ರಲ್ಲಿ ವಸತಿ ರಹಿತ ಸೇತು ಬಂಧ ಶಾಲೆ ತೆರೆಯಿತು.
ಅಂದು ಒಬ್ಬರು ಶಿಕ್ಷರು, 25 ಮಕ್ಕಳಿದ್ದರು. ಈಗ ಸ್ವಂತ ಕಟ್ಟಡ, 33 ಮಕ್ಕಳು ಇಬ್ಬರು ಶಿಕ್ಷಕಿಯರು, ಶೌಚಾಲಯ, ಕುಡಿಯುವ ನೀರು, ಅಕ್ಷರ ದಾಸೋಹದ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯ ಹೊಂದುವ ಮೂಲಕ ಉತ್ತಮ ಶಾಲೆಯೆಂದು ಇಲಾಖೆ ಮತ್ತು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕಟ್ಟಡ ನಿರ್ಮಿಸಲಾಗಿದೆ. ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುಮಾರ ನಾಯಕ್ ಜುಲೈ ತಿಂಗಳಲ್ಲಿ ಭೇಟಿ ನೀಡಿ, ಬೋದನಾ ಕ್ರಮದಲ್ಲಿ ಹಲವು ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದರು. ಇಲಾಖೆ ಅಧಿಕಾರಿಗಳು ಶಾಲೆಗೆ ಅಗಾಗ ಭೇಟಿ ನೀಡುವ ಮೂಲಕ ಮಕ್ಕಳ ಕಲಿಕೆ ಪ್ರಗತಿಯನ್ನು ಪರೀಶಿಲನೆ ಮಾಡುತ್ತಿರುವುದಾಗಿ ಶಿಕ್ಷಣ ಸಂಯೋಜಕ ತಮ್ಮಣ್ಣಗೌಡ ಹೇಳುತ್ತಾರೆ.
ಕನ್ನಡ ಮಾಧ್ಯಮದ ಜೊತೆಗೆ ಖಾಸಗಿ ಶಾಲೆಗಳ ಪಠ್ಯ ಪುಸ್ತಕಗಳ ಮಾದರಿಯಲ್ಲಿ ಇಂಗ್ಲಿಷನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಕಲಿಕೆಯ ಸಾಮರ್ಥ್ಯ ಹೆಚ್ಚಿಸಲಾಗಿದೆ ಎನ್ನುತ್ತಾರೆ ಶಿಕ್ಷಕಿ ವೀಣಾಶ್ರೀ.
ಶಾಲೆ ಅಭಿವೃದ್ಧಿಗೆ ಎಸ್ಡಿಎಂಸಿ, ಹಿರೀಸಾವೆ ಗ್ರಾ. ಪಂ. ಸಂಪೂರ್ಣ ಸಹಕಾರ ನೀಡುತ್ತಿದ್ದೆ, ಮಕ್ಕಳ ಸೇರುವಿಕೆ ಮತ್ತು ಕಲಿಸುವಿಕೆಗೆ ಪೋಷಕರು ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಚಂದ್ರಕಲಾ.
ಶಾಲೆಯಲ್ಲಿ 5 ತರಗತಿ ಗಳಿದ್ದು, ಇಬ್ಬರು ಶಿಕ್ಷಕರು ಇರುವುದರಿಂದ ಇಲಾಖೆಯ ಕೆಲಸ ಮತ್ತು ತರಬೇತಿ ದಿನಗಳಲ್ಲಿ ಒಬ್ಬರೆ ಎಲ್ಲ ತರಗತಿಗಳನ್ನು ನಡೆಸುವುದು ಕಷ್ಟವಾಗುತ್ತದೆ. ಇನ್ನೊಬ್ಬ ಶಿಕ್ಷಕರ ಅಗತ್ಯವಿದೆ. ಆಟದ ಮೈದಾನ ಮತ್ತು ಕಂಪ್ಯೂಟರ್ ಕಲಿಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಈ ಶಾಲೆ ಇನ್ನೂ ಅಭಿವೃದ್ಧಿ ಹೊಂದಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.