ಮುಂಡಗೋಡ: ಹುಚ್ಚು ನಾಯಿ ಕಡಿತಕ್ಕೊಳಗಾದ ಎರಡು ಆಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ಶನಿವಾರ ರಾತ್ರಿ ಜರುಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಹುಚ್ಚು ನಾಯಿ ಆಕಳು ಒಂದಕ್ಕೆ ಕಚ್ಚಿದೆ ಎನ್ನಲಾಗಿದ್ದು ಇದಾದ ನಂತರ ಕೆಲವೇ ಗಂಟೆಗಳಲ್ಲಿ ಆಕಳು ರಸ್ತೆ ಮೇಲೆ ಹೋಗುತ್ತಿದ್ದವರಿಗೆ ಹಾಯಲು ಮುಂದಾಗಿದೆ. ಮೊದಲಿಗೆ ಆಕಳು ಹೀಗೇಕೆ ಮಾಡುತ್ತಿದೆ ಎನ್ನುವುದು ತಿಳಿಯದೇ ಜನರು ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಕೆಲವು ಗಂಟೆಗಳ ನಂತರ ಆಕಳು ಸಿಕ್ಕಸಿಕ್ಕವರಿಗೆ ಹಾಯಲು ಮುಂದಾದಾಗ ವಿಷಯ ತಿಳಿದ ಸಾರ್ವಜನಿಕರು ಅದನ್ನು ಹರಸಾಹಸದಿಂದ ಹಗ್ಗದಿಂದ ಬಿಗಿದು ಶಿವಾಜಿ ಸರ್ಕಲ್ನಲ್ಲಿ ಕಂಬಕ್ಕೆ ಕಟ್ಟಿದ್ದಾರೆ. ಕೆಲವು ಗಂಟೆಗಳಲ್ಲಿ ಆಕಳು ಸಾವನ್ನಪ್ಪಿದೆ ಎನ್ನಲಾಗಿದೆ. ಈ ಘಟನೆ ಮರೆಯುವ ಮುನ್ನವೇ ಶನಿವಾರ ಸಂಜೆ ಮತ್ತೊಂದು ಆಕಳು ಇದೇ ತರಹ ರಸ್ತೆ ಮೇಲಿನ ಜನರಿಗೆ ಹಾಯಲು ಮುಂದಾಗಿದ್ದು, ಕೆಲವರನ್ನು ಬೆನ್ನಟ್ಟಿದೆ. ರಾತ್ರಿಯ ವೇಳೆಗೆ ಜನರು ಅದನ್ನು ಹಗ್ಗದಿಂದ ಕಟ್ಟಿ ಪಟ್ಟಣದ ಹೊರವಲಯದ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಸನಿಹ ಕಟ್ಟಿ ಹಾಕಿದ್ದಾರೆ.
`ಹುಚ್ಚು ನಾಯಿಯೊಂದು ಕೆಲ ದಿನಗಳ ಹಿಂದೆ ಆಕಳಿಗೆ ಕಚ್ಚಿದ್ದರಿಂದ ಆಕಳಿಗೆ ವಿಷ ಏರಿ ಸಿಕ್ಕ ಸಿಕ್ಕವರಿಗೆ ಹಾಯಲು ಮುಂದಾಗಿದೆ. ಅದನ್ನು ಹಗ್ಗದಿಂದ ಕಟ್ಟಿಹಾಕಲಾಗಿ ಬೆಳಗಿನ ಜಾವ ಅದು ಮೃತಪಟ್ಟಿತು. ಅದರ ಜೊಲ್ಲು ಸ್ರವಿಸಿರುವ ಇನ್ನೊಂದು ಆಕಳು ಸಹ ನಿಯಂತ್ರಣ ಕಳೆದುಕೊಂಡು ಜನರಿಗೆ ಹಾಯಲು ಮುಂದಾದಾಗ ಅದನ್ನು ಹಗ್ಗದಿಂದ ಕಟ್ಟಿ ಹೊರವಲಯದತ್ತ ಕಟ್ಟಿ ಹಾಕಿದ್ದೇವೆ. ನಾಲ್ಕೈದು ಗಂಟೆಗಳಲ್ಲಿ ಅದು ಪ್ರಾಣ ಬಿಟ್ಟಿದೆ' ಎಂದು ಆಕಳ ಮಾಲೀಕ ರವಿರಾಜ ಕನ್ನೂರ(ಗೌಳಿ) ಹೇಳಿದರು.