ನಾಪೋಕ್ಲು: ರಾಜಸ್ತಾನದ ಜೋಧ್ಪುರದಲ್ಲಿ ಹೃದಯಾಘಾತದಿಂದ ಮೃತಪಟ್ಟ ಕೊಡಗಿನ ಯೋಧ ಹರೀಶ್ ಅವರ ಅಂತ್ಯಕ್ರಿಯೆ ಹುಟ್ಟೂರಾದ ಪಾಲೂರಿನಲ್ಲಿ ಭಾನುವಾರ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಾಂಪ್ರದಾಯಿಕ ವಿಧಿಗಳೊಂದಿಗೆ ಪಾಲೂರಿನಲ್ಲಿ ಯೋಧನ ಅಂತ್ಯಕ್ರಿಯೆ ಮಾಡಲಾಯಿತು. ಇದಕ್ಕೂ ಮುನ್ನ ಪೊಲೀಸರು ಕುಶಾಲು ತೋಪು ಸಿಡಿಸಿ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಬೆಳಿಗಿನ ಜಾವ ಆರು ಗಂಟೆಗೆ ಬೆಂಗಳೂರಿನಿಂದ ಹರೀಶ್ ಅವರ ಪಾರ್ಥಿವ ಶರೀರ ವಿಶೇಷ ವಾಹನದಲ್ಲಿ ಪಾಲೂರಿನ ಮನೆಗೆ ತರಲಾಯಿತು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಜಿ.ಪಂ ಅಧ್ಯಕ್ಷ ಶಾಂತೇಯಂಡ ರವಿಕುಶಾಲಪ್ಪ ಮತ್ತಿತರರು ಮುಖಂಡರು ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.
ಯೋಧ ಹರೀಶ್ ಕಳೆದ ಮೇ5ರಂದು ಹೊದ್ದೂರು ಪಾಲೆಮಾಡು ಗ್ರಾಮದ ಹರ್ಷಿತಾ ರೈ ಅವರನ್ನು ವಿವಾಹವಾಗಿದ್ದರು. ವಿವಾಹವಾದ ತಿಂಗಳ್ಲ್ಲಲೇ ಪತಿಯನ್ನು ಕಳೆದುಕೊಂಡ ಹರ್ಷಿತಾ ರೈ ಪತಿಯ ಶವದ ಮುಂದೆ ಕಣ್ಣೀರಿಟ್ಟ ದೃಶ್ಯ ಹೃದಯವಿದ್ರಾವಕವಾಗಿತ್ತು.
`ರಜೆ ಮುಗಿಸಿ ಕರ್ತವ್ಯಕ್ಕೆ ತೆರಳಿದ ಒಂದೇ ದಿನದಲ್ಲಿ ಹರೀಶ್ ಅಸ್ವಸ್ಥರಾಗಿದ್ದರು. ಸೂಕ್ತ ಚಿಕಿತ್ಸೆ ನೀಡುವ ಮುನ್ನವೇ ಮೃತರಾದರು~ ಎಂದು ಜೋಧಪುರದಿಂದ ಮೃತದೇಹದೊಡನೆ ಕೊಡಗಿಗೆ ಆಗಮಿಸಿದ್ದ ಹರೀಶ್ ಸ್ನೇಹಿತ ಪ್ರತಿಕ್ರಿಯಿಸಿದ ಜಯಂತ್ ಗೌಡ ತಿಳಿಸಿದರು.