ದಾವೂಸ್ (ಪಿಟಿಐ): ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಭಾರತವು ಹೂಡಿಕೆಗೆ ಅತ್ಯುತ್ತಮ ದೇಶ ಎನ್ನುವ ಮೆಚ್ಚುಗೆ ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ವ್ಯಕ್ತವಾಗಿದೆ.
ದೇಶವು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಆರ್ಥಿಕ ಪ್ರಗತಿಯ ನಡುವೆ ಉತ್ತಮ ಸಮತೋಲನ ಕಾಯ್ದುಕೊಂಡಿದ್ದು, ಹೂಡಿಕೆಗೆ ಅತ್ಯುತ್ತಮ ತಾಣವಾಗಿದೆ. ಉಳಿದ ದೇಶಗಳಿಗೆ ಹೋಲಿಸಿದರೆ, ಜಾಗತಿಕ ಸಾಲ ಮೌಲ್ಯ ಮಾಪನ ಸಂಸ್ಥೆಗಳು ಭಾರತಕ್ಕೆ ಗರಿಷ್ಠ ಮಟ್ಟದ ಮಾನದಂಡ (ರೇಟಿಂಗ್) ನೀಡಿವೆ ಎಂದು ಜಾಗತಿಕ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಅಮೆರಿಕದ ಸಾಲ ಯೋಗ್ಯತೆ ಮಟ್ಟವನ್ನು ತಗ್ಗಿಸಿದ `ಎಸ್ಅಂಡ್ಪಿ ಸಂಸ್ಥೆಯ ಅಧ್ಯಕ್ಷ ಡಗ್ಲಾಸ್ ಪೀಟರ್ಸನ್ ಭಾರತವು ಹೂಡಿಕೆಯ ವಿಷಯದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶಗಳಲ್ಲಿ ಆರ್ಥಿಕ ನೀತಿಗಳು, ಸುಧಾರಣೆಗಳು ಜಾರಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಜಾರಿಗೊಳ್ಳುವ ನೀತಿಗಳು ಆರೋಗ್ಯಕರ ಬೆಳವಣಿಗೆಯಾಗಿರುತ್ತವೆ. ಭಾರತವು ಅಳವಡಿಸಿಕೊಂಡಿರುವ ಆರ್ಥಿಕ ನೀತಿ ಮತ್ತು ಸುಸ್ಥಿರ ಪ್ರಗತಿಯಿಂದ ಶೃಂಗ ಸಭೆಯಲ್ಲಿ ಯೂರೋಪ್ ಬಿಕ್ಕಟ್ಟಿನ ಬದಲು ಭಾರತದ ಸುತ್ತ ಚರ್ಚೆ ಕೆಂದ್ರೀಕೃತವಾಗಿತ್ತು ಎಂದು ಅವರು ಹೇಳಿದ್ದಾರೆ.
ದೇಶದ ಬಹುಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅವಕಾಶ ನೀಡುವ ಮಸೂದೆಯು ಸದ್ಯ ತಡೆಹಿಡಿಯಲಾಗಿದ್ದರೂ, ಇದಕ್ಕೆ ಸಂಬಂಧಿಸಿದ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ವಾಣಿಜ್ಯ ಸಚಿವ ಆನಂದ ಹೇಳಿದ್ದಾರೆ.
ಭಾರತ್ ಫ್ರೋಜ್ ಸಮೂಹದ ಬಾಬಾ ಕಲ್ಯಾಣಿ ಸೇರಿದಂತೆ ಪ್ರಮುಖ ಉದ್ಯಮ ಮುಖಂಡರು ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 8ರಷ್ಟು ಪ್ರಗತಿ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.