ಕೊಣನೂರು (ರಾಮನಾಥಪುರ): ಹೃದಯ್ಕ ಸಂಬಂಧಿ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೃದಯ ರೋಗ ತಜ್ಞ ಡಾ. ನವೀನ್ ತಿಳಿಸಿದರು.
ಪಟ್ಟಣದ ಲಯನ್ಸ್ ವಿದ್ಯಾನಿಕೇತನ ಶಾಲೆಯಲ್ಲಿ ಮಂಗಳವಾರ ಲಯನ್ಸ್ ಸೇವಾ ಸಂಸ್ಥೆ ಹಾಗೂ ಹಾಸನದ ಸಿ.ಎಸ್.ಐ. ಮಿಷನ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಹೃದಯ ಕಾಯಿಲೆ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಧಕ್ಕೆ ಉಂಟಾಗದಂತೆ ಜಾಗ್ರತೆ ವಹಿಸಿದರೆ ಹೃದಯ ಸಂಬಂಧಿ ಕಾಯಿಲೆಗಳನ್ನು ಸ್ವಲ್ಪಮಟ್ಟಿಗೆ ತಡೆಗಟ್ಟಲು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಕಾಯಿಲೆ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಕಾಣುವುದು ಒಳಿತು. ಇದರಿಂದ ಜೀವಕ್ಕೆ ರಕ್ಷಣೆ ಸಿಗಲಿದೆ ಎಂದರು.
ಲಯನ್ಸ್ ವಿದ್ಯಾನಿಕೇತನ ಶಾಲೆ ಅಧ್ಯಕ್ಷ ಅಬುಬೂಕರ್, ಲಯನೆಸ್ ಅಧ್ಯಕ್ಷೆ ವೀಣಾ ಮುರುಳಿಧರ್, ಕಾರ್ಯದರ್ಶಿ ಕೆ.ಎಸ್. ವೀಣಾ ಸುಬ್ರಹ್ಮಣ್ಯ, ಖಜಾಂಚಿ ಭಾರತಿ ಶ್ರೀಧರ್, ಮಾಜಿ ಅಧ್ಯಕ್ಷ ಕೆ.ಪಿ. ನಾಗೇಶ್, ರವಿಕುಮಾರ್, ನಾಗರಾಜು, ಲಯನ್ಸ್ ಕ್ಲಬ್ ಅಧ್ಯಕ್ಷೆ ಮನೋರಮಾ, ಕಾರ್ಯದರ್ಶಿ ಬಿ.ಎಸ್. ನಾಗವೀಣಾ ಸುಬ್ರಹ್ಮಣ್ಯ ಇದ್ದರು. ಹೃದಯ ರೋಗ ತಜ್ಞ ಡಾ. ನವೀನ್ ಶಿಬಿರದಲ್ಲಿ ಪಾಲ್ಗೊಂಡಿದ್ದ 150 ಮಂದಿಗೆ ತಪಾಸಣೆ ನಡೆಸಿದರು. ಇವರಲ್ಲಿ 25 ಮಂದಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇರುವುದು ಪತ್ತೆಯಾಗಿದೆ.