ಜನವಾಡ: ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಅಷ್ಟೂರು ಹೇಳಿದರು.
ಬೀದರ್ ತಾಲ್ಲೂಕಿನ ಕೊಳಾರ(ಬಿ) ಗ್ರಾಮದಲ್ಲಿ ಬುಧವಾರ ನಡೆದ ಕರ್ನಾಟಕ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಪಾಲಕರು ಮತ್ತು ಮಕ್ಕಳ ನಡುವೆ ಅಂತರ ಹೆಚ್ಚುತ್ತಿದ್ದು, ಅನೇಕ ಮಕ್ಕಳು ತಮ್ಮ ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಗುರು–ಹಿರಿಯರ ಬಗೆಗಿನ ಗೌರವವೂ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಿಂದ ಮಕ್ಕಳಲ್ಲಿ ಮಾನವೀಯ ಗುಣ, ಸೇವಾ ಮನೋಭಾವ ಬೆಳೆಯುತ್ತದೆ. ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇಂಥ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಪಾಲಕರು, ಗುರು–ಹಿರಿಯರನ್ನು ಗೌರವದಿಂದ ಕಾಣುತ್ತಾರೆ ಎಂದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗಬೇಕು ಎನ್ನುವುದನ್ನು ಈಗಲೇ ನಿರ್ಧರಿಸಬೇಕು. ಅದರ ಸಾಕಾರಕ್ಕಾಗಿ ಪ್ರಯತ್ನಿಸಬೇಕು ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಿ.ಜಿ. ಶೆಟಕಾರ್ ಹೇಳಿದರು.
ಎನ್ಎಸ್್ಎಸ್ ಸಂಯೋಜನಾಧಿಕಾರಿ ಡಾ. ಬಸವರಾಜ ಬಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊ. ಆರ್.ಎಂ. ನಂದಿ, ಡಾ. ಎಸ್.ವಿ. ಜೂಜಾ, ಪ್ರಮುಖರಾದ ರುಕ್ಮೊದ್ದೀನ್, ಮಾರುತಿ ಮೇತ್ರೆ, ರೇವಣಪ್ಪ ಚಿಲ್ಲರ್ಗಿ, ಪದ್ಮಾಕರ ಕಲವಾಡಿ, ಶಾಂತಕುಮಾರ್, ಜಗನ್ನಾಥ ಕಮಲಾಪುರೆ ಇದ್ದರು.
ಕೊಡಂಬಲದ ಗುರುಸ್ವಾಮಿ, ಶಿವಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಚಾರ್ಯ ಡಾ. ಬಿ.ಎಸ್. ಬಿರಾದಾರ್ ಸ್ವಾಗತಿಸಿದರು. ಸಚಿನಕುಮಾರ್ ವಿಶ್ವಕರ್ಮ ನಿರೂಪಿಸಿದರು. ಗಣೇಶ ತೋರೆ ವಂದಿಸಿದರು.