ಶ್ರೀನಗರ (ಪಿಟಿಐ): ಸತತವಾಗಿ ಬೀಳುತ್ತಿರುವ ಹಿಮ ಮತ್ತು ಭೂಕುಸಿತದಿಂದಾಗಿ ಮುಚ್ಚಲಾಗಿದ್ದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಸಾರ್ವಜನಿಕ ಸಂಚಾರಕ್ಕೆ ಭಾನುವಾರ ಮುಕ್ತಗೊಳಿಸಲಾಯಿತು.
ಇದರಿಂದ ಕಳೆದ ಮೂರು ದಿನಗಳಿಂದ ರಸ್ತೆ ಬದಿಯಲ್ಲಿಯೇ ನಿಂತಿದ್ದ ನೂರಾರು ವಾಹನಗಳಿಗೆ ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಲಾಯಿತು.
`ರಸ್ತೆ ಬಂದ್ ಆಗಿದ್ದರಿಂದ, 90 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸೇಬು ತುಂಬಿಸಿಕೊಂಡಿದ್ದ ಲಾರಿಗಳು ರಸ್ತೆ ಬದಿ ನಿಂತಿದ್ದವು. ಇದರಿಂದಾಗಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಸೇಬು ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಯಿತು~ ಎಂದು ಅವರು ಹೇಳಿದ್ದಾರೆ. 294 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಗುರುವಾರದಿಂದ ಮುಚ್ಚಿದ್ದರಿಂದ ವಿವಿಧ ಕಡೆಗಳಲ್ಲಿ ಮೂರು ಸಾವಿರಕ್ಕೂ ಅಧಿಕ ವಾಹನಗಳು ಚಲಿಸಲಾಗದೆ ನಿಂತಲ್ಲೇ ನಿಲ್ಲುವಂತಾಗಿತ್ತು.
ವಾಯುಪಡೆ ಕಾರ್ಯಾಚರಣೆ: ಕೆಟ್ಟ ಹವಾಮಾನದಿಂದ ಇಲ್ಲಿ ಸಿಕ್ಕಿಹಾಕಿಕೊಂಡಿದ್ದ 1,377 ಪ್ರವಾಸಿಗರನ್ನು ವಾಯುಪಡೆ ಶನಿವಾರ ವಿಶೇಷ ವಿಮಾನದಲ್ಲಿ ಜಮ್ಮು ಹಾಗೂ ಇತರ ಸ್ಥಳಗಳಿಗೆ ಕರೆದೊಯ್ಯಿತು.