ಭರಮಸಾಗರ: ಚತುಷ್ಪಥ ರಸ್ತೆ ನಿರ್ಮಾಣದ ನಂತರ ನಿರ್ಲಕ್ಷ್ಯಕ್ಕೆ ಒಳಗಾಗಿ ಹಾಳಾಗಿದ್ದ ಗ್ರಾಮದಲ್ಲಿನ ಹಳೇ ಹೆದ್ದಾರಿ ಸುಧಾರಣೆಗೆ ಕೊನೆಗೂ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಬುಧವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ, ರಸ್ತೆ ಸರ್ವೇ ಕಾರ್ಯ ನಡೆಸಿದರು. ಬೈಪಾಸ್ ನಿರ್ಮಾಣದ ನಂತರ ಸೂಕ್ತ ನಿರ್ವಹಣೆ ಇಲ್ಲದೆ ಮುಖ್ಯ ರಸ್ತೆಯಲ್ಲಿ ಗುಂಡಿ ಗಳಾಗಿ ಸಂಚಾರ ದುಸ್ತರವಾಗಿತ್ತು.
ರಸ್ತೆ ಅವ್ಯವಸ್ಥೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು. ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಯನ್ನು ಹೊಣೆ ಮಾಡಿದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಇನ್ನೂ ತಮ್ಮ ಇಲಾಖೆಗೆ ಹಸ್ತಾಂತರಗೊಂಡಿಲ್ಲ ಎಂದು ಹೇಳುತ್ತಿದ್ದ ಕಾರಣ ಹೆದ್ದಾರಿ ರಸ್ತೆ ಸುಧಾರಣೆ ಕಾಣದೆ ಸಮಸ್ಯೆ ಹಾಗೇ ಮುಂದುವರಿದಿತ್ತು.
ಇದೀಗ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸುವ ಸೂಚನೆ ನೀಡಿದೆ. ಸರ್ವೇ ಕಾರ್ಯ ಮುಗಿದ ನಂತರ ಜ. 22ರಿಂದ ಕಾಮಗಾರಿ ಆರಂಭವಾಗಲಿದೆ. ಗ್ರಾಮದ ಎರಡು ಬದಿಯ ಬೈಪಾಸ್ವರೆಗೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ 40ಎಂಎಂ ಪದರದ ಡಾಂಬರು ಹಾಕಿ 7 ಮೀ ರಸ್ತೆ ನಿರ್ಮಿಸಲಾಗುವುದು ಎಂದು ಎಂಜಿನಿಯರ್ ಸುಧೀರ್ರೆಡ್ಡಿ ತಿಳಿಸಿದ್ದಾರೆ.