ಹೈದರಾಬಾದ್ (ಪಿಟಿಐ): ಹೈದರಾಬಾದ್ ಅವಳಿ ಬಾಂಬ್ ಸ್ಫೋಟವು ಪೂರ್ವ ಯೋಜಿತ ಕೃತ್ಯ ಎಂಬುದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿದೆ.
ಸ್ಫೋಟದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದಿಂದ ಲಭ್ಯವಾಗಿರುವ ದೃಶ್ಯಗಳಿಂದ ಇದು ಪೂರ್ವ ಯೋಜಿತ ಕೃತ್ಯ ಎಂಬುದರಲ್ಲಿ ಸಂದೇಹವೆ ಇಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ.
ಉಗ್ರರು ವ್ಯವಸ್ಥಿತವಾಗಿ ದಾಳಿ ಮಾಡಿದ್ದಾರೆ. ಸಾಯಿ ಬಾಬಾ ಮಂದಿರಾ ಅವರ ಗುರಿಯಾಗಿತ್ತು ಆದರೆ ಅಲ್ಲಿ ಭದ್ರತೆ ಮತ್ತು ಸಿಸಿಟಿವಿ ಕ್ಯಾಮೆರಾಗಳಿದ್ದರಿಂದ ಜನಜಂಗುಳಿ ಇದ್ದ ಈ ಸ್ಥಳದಲ್ಲಿ ಸ್ಫೋಟ ನಡೆಸಿದ್ದಾರೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ನಗರದ ಎಲ್ಲ ವಸತಿ ಗೃಹಗಳನ್ನು ತೀವ್ರವಾಗಿ ತಪಾಸಣೆ ಮಾಡಲಾಗುತ್ತಿದೆ. ದಾಳಿಯ ಬಗ್ಗೆ ಮಹತ್ವದ ಸಾಕ್ಷ್ಯಗಳು ದೊರೆತಿದ್ದು ಉಗ್ರರನ್ನು ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದರು.