ಹೊಳಲ್ಕೆರೆ: ಪ.ಪಂ. ಸದಸ್ಯ ದುರುಗೇಶ್ ಅವರ ನಿಧನದಿಂದ ತೆರವಾಗಿದ್ದ ಇಲ್ಲಿನ ಪ.ಪಂ. 15ನೇ ವಾರ್ಡ್ನ ಚುನಾವಣೆಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಮಂಗಳವಾರ, ಮಹಾಸ್ವಾಮಿ (ಬಿಜೆಪಿ), ಕೃಷ್ಣಮೂರ್ತಿ (ಕಾಂಗ್ರೆಸ್), ಚಂದ್ರಪ್ಪ (ಜೆಡಿಎಸ್) ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಫೆ. 27ರಂದು ಚುನಾವಣೆ ನಡೆಯಲಿದೆ.
ಪರಿಶಿಷ್ಟ ಜಾತಿಗೆ ಕ್ಷೇತ್ರ ಮೀಸಲಾಗಿದ್ದು, 17ಕ್ಕೆ ನಾಮಪತ್ರ ಪರಿಶೀಲನೆ, 19ಕ್ಕೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ. ಮಾರ್ಚ್ 1ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ನಾಗರಾಜ ಭಟ್ ತಿಳಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆ: ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಹಾಸ್ವಾಮಿ ಬಿಜೆಪಿಗೆ ಸೇರ್ಪಡೆಗೊಂಡು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಪಾಂಡುರಂಗ ಸ್ವಾಮಿ, ಕೆಂಗುಂಟೆ ಜಯಪ್ಪ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಪಿ.ಆರ್. ಶಿವಕುಮಾರ್ ತಿಳಿಸಿದ್ದಾರೆ.ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಜಯಸಿಂಹ ಖಾಟ್ರೋತ್, ಮಲ್ಲೇಶ್, ಗೌರಿ ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.