ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕ್ಯಾಂಪಸ್‌ನಲ್ಲಿ ಹಲವು ಸಮಸ್ಯೆ !

Last Updated 3 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

ಕೋಲಾರ: ಒಂದೂವರೆ ದಶಕದಿಂದ ಹೆಚ್ಚು ಕಾಲದಿಂದ ನಗರದ ಬಾಲಕರ ಸರ್ಕಾರಿ ಕಾನೂನು ಕಾಲೇಜು ಕಟ್ಟಡದ ಇಕ್ಕಟ್ಟಿನಲ್ಲೆ ಕಾರ್ಯ ನಿರ್ವ ಹಿಸುತ್ತಿದ್ದ ಸರ್ಕಾರಿ ಕಾನೂನು ಕಾಲೇಜು ಕೆಲವು ದಿನಗಳ ಹಿಂದೆ ಹೊಸದಾದ ಸ್ವಂತ ಕ್ಯಾಂಪಸ್‌ಗೆ ಬಂದಾಗಿದೆ. 

 ಈಗ ಅಲ್ಲಿ ವಿದ್ಯಾರ್ಥಿ-ಸಿಬ್ಬಂದಿಗೆ ಸಂತಸ ತರುವ ಅಂಶಗಳ ಜೊತೆಗೆ ಹೊಸ ಸಮಸ್ಯೆಗಳು ಎದುರಾಗಿವೆ.
ನಗರದಿಂದ 5 ಕಿಮೀ ದೂರದಲ್ಲಿರುವ ಅರಹಳ್ಳಿಯ ಪವರ್ ಗ್ರಿಡ್ ಸಮೀಪ 4.20 ಎಕರೆ ಸರ್ಕಾರಿ ಜಮೀನಿ ನಲ್ಲಿ 1 ಕೋಟಿ ರೂಪಾಯಿ ನಿರ್ಮಿಸಿರುವ ಅಪೂರ್ಣ ಕಟ್ಟಡಕ್ಕೆ ಸ್ಥಳಾಂತರಗೊಂಡ ಕಾಲೇಜು ಸುತ್ತ ಮುತ್ತ ಉತ್ತಮ ಪರಿಸರವಿದೆ. ಹಸಿರು ಸೂಸುವ ಹೊಲ, ತಂಗಾಳಿ ಮೋಹಕವಾಗಿದೆ. ಕಟ್ಟಡವೂ ಆಕರ್ಷಕ ವಾಗಿದೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಸಂಭ್ರಮ ಪಡದಂತ ಸನ್ನಿವೇಶವೂ ಅಲ್ಲೇ ಇದೆ.

ಕಚೇರಿ, ಗ್ರಂಥಾಲಯ ಮತ್ತು ಪ್ರಾಂಶುಪಾಲ ರಿಗೆಂದೇ ನಿರ್ಮಿಸಲಾಗಿರುವ ಐದು ಕೊಠಡಿಗಳು ಮಾತ್ರ ಈ ಕಟ್ಟಡದಲ್ಲಿದ್ದು, ಅವುಗಳನ್ನೆ ಬಳಸಿ ಕಾಲೇಜು ನಡೆಸಲಾಗುತ್ತಿದೆ. ಒಂದು ಕೊಠಡಿ ಉಪನ್ಯಾಸಕರಿಗೆ, ಮತ್ತೊಂದು ಕೊಠಡಿ  ಕಚೇರಿ ಕೆಲಸಕ್ಕೆ, 2 ಕೊಠಡಿ ಗಳನ್ನು ತರಗತಿಗೆ ಬಳಸಲಾಗುತ್ತಿದೆ. ಗ್ರಂಥಾಲಯ ಕ್ಕೆಂದು ಮೀಸಲಾದ ಕೊಠಡಿಯನ್ನು ಎರಡು ಭಾಗವಾಗಿ ವಿಂಗಡಿಸಿ ಅಲ್ಲಿಯೂ ತರಗತಿಗಳನ್ನು ನಡೆಸಲಾಗುತ್ತಿದೆ.

ಕಟ್ಟಡದ ಯೋಜನೆ ಪ್ರಕಾರ, ಮೊದಲ ಮಹಡಿಯಲ್ಲಿ ತರಗತಿ ನಡೆಯಬೇಕು. ಆದರೆ ಮಹಡಿ ಇನ್ನೂ ನಿರ್ಮಾಣವಾಗಿಲ್ಲ. ಹೀಗಾಗಿ ತರಗತಿಗೆ ಕೊಠಡಿಗಳ ಕೊರತೆ ಎದುರಾಗಿದೆ. ಈಗ ತರಗತಿಗಳನ್ನು ನಡೆಸುತ್ತಿರುವ ಕೊಠಡಿಗಳಲ್ಲಿ ಕಪ್ಪು ಹಲಗೆಗಳಿಲ್ಲ. ಹೀಗಾಗಿ ಉಪನ್ಯಾಸಕರು ಬರೆಯುತ್ತಾ ಪಾಠ ಮಾಡುವ ಅವಕಾಶವೂ ಇಲ್ಲವಾಗಿದೆ. ಕಾನೂನು ಕಾಲೇಜಿಗೆ ಅತ್ಯಗತ್ಯವಾದ ಅಣಕು ನ್ಯಾಯಾಲಯ (ಮೂಟ್ ಕೋರ್ಟ್) ನಡೆಸಲೂ ಸದ್ಯಕ್ಕೆ ಸ್ಥಳಾ ವಕಾಶವಿಲ್ಲ. ಗ್ರಂಥಾಲಯ ಕಾರ್ಯನಿರ್ವಹಿ ಸುತ್ತಿಲ್ಲವಾದ್ದರಿಂದ ಪುಸ್ತಕ ಎರವಲು ಪಡೆ ಯುವ ಅವಕಾಶ ವಿದ್ಯಾರ್ಥಿಗಳಿಗೆ ಸದ್ಯಕ್ಕಿಲ್ಲವಾಗಿದೆ.

 ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯೂ ಇಲ್ಲಿಲ್ಲ. ಶೌಚಾಲಯಗಳನ್ನು ನಿರ್ಮಿಸ ಲಾಗಿದ್ದರೂ, ನೀರಿಲ್ಲದ ಕಾರಣ ಅವುಗಳನ್ನು ಬಳಸಲು ಅವಕಾಶವಿಲ್ಲದಂತಾಗಿದೆ.ಬೋಧಕ ಸಿಬ್ಬಂದಿ ಒಂದು ಶೌಚಾಲಯವನ್ನು ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು ಮಾತ್ರ ಅಂತಂತ್ರರಾಗಿದ್ದಾರೆ.

ಸಿಬ್ಬಂದಿ ಕೊರತೆ: ಕಾಲೇಜಿನಲ್ಲಿ ಪ್ರಸ್ತುತ ಸಿಬ್ಬಂದಿ ಕೊರತೆಯೂ ಇದೆ. ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರಂಥಾಲಯ ಸಹಾಯಕರು, ಅಟೆಂಡರ್‌ಗಳ ಹುದ್ದೆ ಭರ್ತಿಯಾಗಿದೆ. ಕಾಲೇಜಿಗೆ ಕಾಂಪೌಂಡ್ ಇಲ್ಲ.  ಕಾವಲು ಸಿಬ್ಬಂದಿ ಕೂಡ ಇಲ್ಲದಿರುವುದರಿಂದ ಸನ್ನಿವೇಶ ಬಿಗಡಾಯಿಸಿದೆ. ಹೀಗಾಗಿ ಯಾವ ವಸ್ತುವನ್ನೂ ಹೊರಗಡೆ ಇಡುವಂತಿಲ್ಲ. ಕಾಲೇಜಿನ ಡೆಸ್ಕ್‌ಗಳು, ಬೀರುಗಳು ಸೇರಿದಂತೆ ಹಲವು ವಸ್ತುಗಳನ್ನು ಗ್ರಂಥಾಲಯ ಕೊಠಡಿಯಲ್ಲೆ ಜೋಡಿಸಿಡಲಾಗಿದೆ.

`ನೀರಿನ ಸಮಸ್ಯೆ ಕುರಿತು ಗಮನ ಸೆಳೆದಾಗ ಪವರ್ ಗ್ರಿಡ್ ಮತ್ತು ಅರಹಳ್ಳಿ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾಧಿಕಾರಿಗೆ ಈಗಾಗಲೇ ಮನವಿಯನ್ನು ಸಲ್ಲಿಸ ಲಾಗಿದೆ. ಸಮಸ್ಯೆ ಪರಿಹರಿಸುವ ಕುರಿತು ಭರವಸೆ ನೀಡಿದ್ದಾರೆ~ ಎಂಬುದು ಪ್ರಭಾರಿ ಪ್ರಾಂಶುಪಾಲರಾದ ಅನಿತಾ ಅವರ ನುಡಿ.

`7 ಕೋಟಿ ವೆಚ್ಚದ ಕಾಲೇಜು ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಪ್ರಸ್ತುತ 1 ಕೋಟಿ ವೆಚ್ಚ ಖರ್ಚು ಮಾಡಿ ನಿರ್ಮಿಸಿರುವ ಮೊದಲ ಹಂತದ ಕೊಠಡಿಗಳಲ್ಲೆ ಹೆಚ್ಚು ದಿನ ತರಗತಿಗಳನ್ನು ನಡೆಸಲು ಸಾಧ್ಯ ವಾಗುವುದಿಲ್ಲ.

ಕೇಂದ್ರ ಸಚಿವ ಕೆ.ಎಚ್.ಮುನಿ ಯಪ್ಪ ಅವರು ಭರವಸೆ ನೀಡಿರುವಂತೆ 5 ಲಕ್ಷ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದೂ ಸೇರಿದಂತೆ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ~ ಎಂಬುದು ಕೆಲವು ಸಿಬ್ಬಂದಿಗಳ ನುಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT