`ಗ್ರೀನ್ ಟ್ರೆಂಡ್~ ಹಸಿರು ಬಿಳಿ ಬಲೂನುಗಳಿಂದ ಅಲ್ಲಿಗೆ ಬರುವವರನ್ನು ಬರಮಾಡಿಕೊಳ್ಳುತ್ತಿತ್ತು. ಸೂಟ್ಧಾರಿ ಅಜ್ಜ, ಮಿಕ್ಕಿ ಮೌಸ್ ವೇಷಧಾರಿಗಳು ಮಕ್ಕಳನ್ನು ಕೈಕುಲುಕಿ ರಂಜಿಸುತ್ತಿದ್ದರು. ರೂಪದರ್ಶಿಯರು ಸ್ವಾಗತ ಕೋರಲೆಂದೇ ಕೈಯಲ್ಲಿ ಹೂ ಹಿಡಿದು ಮಿಸುಕಾಡುತ್ತಿದ್ದರು. ಸಿನಿ ತಾರೆಗಳನ್ನು ನೋಡಲು ನಿಮಿಷ ನಿಮಿಷಕ್ಕೂ ಜನ ಹೆಚ್ಚುತ್ತಿದ್ದರು.
ಅದು ಈಗಷ್ಟೇ ನಗರದ ಚಂದ್ರಾಲೇಔಟ್ನಲ್ಲಿ ತೆರೆದುಕೊಂಡ ಗ್ರೀನ್ ಟ್ರೆಂಡ್ ಸೌಂದರ್ಯ ಮಳಿಗೆಯ ಉದ್ಘಾಟನಾ ಸಮಾರಂಭ. ನಗರಿಗರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ತಕ್ಕಂಥ ಸೌಂದರ್ಯ ಸೇವೆಯನ್ನು ನೀಡುವ ಉಮೇದಿನೊಂದಿಗೆ ಕೆವಿನ್ ಕೇರ್ ಅಂಗವಾಗಿ ಈ ಸಲೂನ್ ಆರಂಭಗೊಂಡಿದೆಯಂತೆ.
ಹೊತ್ತು ಕಳೆಯುತ್ತಿದ್ದರೂ ಸಿನಿಮಾ ಮಂದಿ ಬರದಿದ್ದನ್ನು ಕಂಡ ಜನ ಅರೆ ಬೇಸರದಿಂದಲೇ ಕಾಯುತ್ತಿದ್ದರು. ಅಷ್ಟರಲ್ಲಾಗಲೇ ಕಿರುತೆರೆ ಕಲಾವಿದೆ ಕಾವ್ಯಾ ಜನಜಂಗುಳಿ ಮಧ್ಯೆ ಹಾಜರಿದ್ದರು. ಗ್ರೀನ್ ಟ್ರೆಂಡ್ಗೆ ಒಪ್ಪುವಂತೆ ಹಸಿರು ಸೀರೆಯನ್ನೇ ಒಪ್ಪವಾಗಿ ಉಟ್ಟು ಬಂದಿದ್ದ ಕಾವ್ಯಾ ಬಂದಾಕ್ಷಣ ಎಲ್ಲರ ಕಣ್ಣು ಅತ್ತ ಹೊರಳಿತ್ತು.
`ಗ್ರೀನ್ ಟ್ರೆಂಡ್~ ಹೆಸರಿಗೆ ತಕ್ಕಂತೆ ತನ್ನ ಸೇವೆ ನೀಡಲಿದೆ. ಎಲ್ಲರಿಗೂ ಸುಂದರವಾಗಿ ಕಾಣಬೇಕೆಂಬ ಬಯಕೆಯಿರುತ್ತದೆ. ಇದಕ್ಕೆಂದು ಜನರು, ಅದರಲ್ಲೂ ಯುವಕ ಯುವತಿಯರು ಕೆಮಿಕಲ್ ಮಿಶ್ರಿತ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇಂದು ಬ್ಯೂಟಿ ಸಲೂನ್ಗಳಲ್ಲೂ ಕೆಮಿಕಲ್ ಮಿಶ್ರಣದ ವಸ್ತುಗಳು ಹೆಚ್ಚು ಬಳಕೆಯಲ್ಲಿವೆ. ಆದರೆ ಗ್ರೀನ್ ಟ್ರೆಂಡ್ನಲ್ಲಿ ನೈಸರ್ಗಿಕ ಉತ್ಪನ್ನಗಳ ಬಳಕೆಗೇ ಒತ್ತು ನೀಡಲಾಗಿದೆ.
ಆಯುರ್ವೇದ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಅದಕ್ಕೆಂದೇ ಜನರ ವಿಶ್ವಾಸವನ್ನು ಗಳಿಸಿದೆ~ ಎಂದು ಸೌಂದರ್ಯದ ಕುರಿತು ನಗುತ್ತಾ ವಿವರಿಸಿದರು.
`ವಿಶಾಲ, ತಂಪು ವಾತಾವರಣ ಹೊಂದಿರುವ ಸಲೂನ್ನಲ್ಲಿ ಹಲವು ವಿಭಾಗಗಳಿವೆ. ಪೆಡಿಕ್ಯೂರ್ ವಿಭಾಗ, ಹೇರ್ವಾಶ್ ವಿಭಾಗ, ಫೇಷಿಯಲ್ ವಿಭಾಗ, ಬಾಡಿ ಸ್ಪಾ ರೂಂ ಹಾಗೂ ಬ್ರೈಡಲ್ ರೂಂ ಹೀಗೆ ಹಲವು ವಿಭಾಗಗಳಿವೆ. ಗುಣಮಟ್ಟದ ಸೇವೆ ಒದಗಿಸಲು ಸ್ಥಳವೂ ಮುಖ್ಯವಾದ್ದರಿಂದ ಆಧುನಿಕವಾಗಿ ಸಲೂನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸಮಾರಂಭಕ್ಕೆ ತಕ್ಕಂತೆ ಕೂದಲಿನ ವಿನ್ಯಾಸ, ಮೇಕಪ್ ಮಾಡಲಾಗುತ್ತದಂತೆ.
ದೇಶದಲ್ಲೇ ಗ್ರೀನ್ ಟ್ರೆಂಡ್ನದ್ದು 80 ಮಳಿಗೆಗಳಿದ್ದು, ಕರ್ನಾಟಕದಲ್ಲಿ ಆರಂಭಿಸುತ್ತಿರುವ 13ನೇ ಮಳಿಗೆ ಇದಾಗಿದೆ~ ಎಂದು ವಿವರಿಸಿದರು ಮುಖ್ಯಸ್ಥ ಗೋಪಾಲಕೃಷ್ಣನ್.
`ಗುಣಮಟ್ಟದ ಸೌಂದರ್ಯ ಸೇವೆ ನೀಡುವುದೇ ನಮ್ಮ ಉದ್ದೇಶ. ಅದರಲ್ಲಿ ಯೋಚಿಸುವ ಅಗತ್ಯವೇ ಇಲ್ಲ ಎನ್ನುವ ಅವರು ಜನರಿಗೆ ಅತ್ಯುತ್ತಮ ತ್ವಚೆ ಮತ್ತು ಕೇಶ ಸೌಂದರ್ಯ ನೀಡಲು ವಿಶೇಷ ತಂಡವೇ ಇಲ್ಲಿದೆ~ ಎಂಬುದನ್ನೂ ತಿಳಿಸಿದರು. ಅತಿ ರಾಸಾಯನಿಕವಲ್ಲದೆ, ತ್ವಚೆಗೆ ಹೊಳಪನ್ನು ತರಬಲ್ಲ ನೈಸರ್ಗಿಕ ಮಾರ್ಗವನ್ನೇ ನಾವು ಅನುಸರಿಸುವುದು. ಅದರಿಂದ ಮಳಿಗೆಗೆ ಗ್ರೀನ್ ಟ್ರೆಂಡ್ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ಅವರು.
ಇಷ್ಟು ವಿವರಿಸುವಷ್ಟರಲ್ಲಿ ಕಿರುತೆರೆ ಕಲಾವಿದೆ ಜಯಶ್ರೀ ಬಂದಾಗಿತ್ತು. ನಟ, ನಿರ್ದೇಶಕ ಪ್ರೇಮ್, ನಟ ದೀಪಕ್ ನಗುತ್ತಾ ಮಳಿಗೆಗೆ ಆಗಮಿಸಿದರು. ಅಷ್ಟೂ ಹೊತ್ತು ಕಾದು ಕುಳಿತಿದ್ದ ಜನರು ಬೇಸರ ಮರೆತು ಸಂತಸದಿಂದ ಮುಗಿಬಿದ್ದರು.
ಉದ್ಘಾಟನೆಗೆಂದು ಕಾಯುತ್ತಿದ್ದ ಮಳಿಗೆಯಲ್ಲಿನ ದೀಪ ಹೊತ್ತಿಸಿ, ಟೇಪ್ ಕತ್ತರಿಸಿ ಉದ್ಘಾಟಿಸಿದರು ಪ್ರೇಮ್. ನಂತರ ಎಲ್ಲರೂ ಕೂಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇಷ್ಟಾಗುವಷ್ಟರಲ್ಲೇ ಅಭಿಮಾನಿಗಳು ನಟರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಶುರುಮಾಡಿದ್ದರು.
ಮಳಿಗೆ ಸ್ಥಳ: ನಂ 92, ಬಾಲಾಜಿ ಕಾಂಪ್ಲೆಕ್ಸ್, 1ನೇ ಮಹಡಿ, 1ನೇ ಮುಖ್ಯರಸ್ತೆ, ಚಂದ್ರಾಲೇಔಟ್, ಅಡಿಗಾಸ್ ಹೋಟೆಲ್ ಪಕ್ಕ. ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೂ ಮಳಿಗೆ ತೆರೆದಿರುತ್ತದೆ. ಸಂಪರ್ಕಕ್ಕೆ: 41204888.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.