ಹೊಸದುರ್ಗ: ಮಳೆ ಕೊರತೆಯಿಂದಾಗಿ ತಾಲ್ಲೂಕಿನ ಜನತೆಯ ಜೀವನಾಡಿ ವೇದಾವತಿನದಿ ಬತ್ತಿಹೋಗಿರುವುದರಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸಲು ಹರಸಾಹಸ ಪಡುತ್ತಿರುವ ಸ್ಥಳೀಯ ಪುರಸಭೆ ಆಡಳಿತ ಹಾಗೂ ಸಾರ್ವಜನಿಕರು ಭಾನುವಾರ ವಿನಾಯಕನ ಮೊರೆ ಹೋದರು.
ಪುರಸಭೆ ಕಚೇರಿ ಮುಂಭಾಗ ವಿರುವ ಐತಿಹಾಸಿಕ ಹಿನ್ನಲೆಯುಳ್ಳ ಗಣೇಶ ಮೂರ್ತಿಗೆ ಸಾರ್ವಜನಿಕರ ಪರವಾಗಿ ಪುರಸಭೆ ಕುಂಭಾಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರುಣನ ಕೃಪೆಗಾಗಿ ಪ್ರಾರ್ಥಿಸಿತು.
ಬೆಳಿಗ್ಗೆ ಗಣೇಶ ಗುಡಿಯನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸಿದನಂತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗಣೇಶ ಮೂರ್ತಿ ಕುಂಭಾಭಿಷೇಕ ನೆರವೇರಿಸಲಾಯಿತು. ಆನಂತರ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪಾರ್ಥಿಸಲಾಯಿತು.
ಶಾಸಕ ಗೂಳಿಹಟ್ಟಿ ಡಿ. ಶೇಖರ್, ಪುರಸಭೆ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಮುಖ್ಯಾಧಿಕಾರಿ ಜಯಣ್ಣ, ಪುರಸಭೆ ಸದಸ್ಯರು, ಸ್ಥಳೀಯ ಮುಖಂಡರು, ಸಾರ್ವಜನಿಕರು ವರುಣನ ಕೃಪೆಗಾಗಿ ವಿನಾಯಕನನ್ನು ಪ್ರಾರ್ಥಿಸಿದರು.