ಹಳಿಯಾಳ: ‘ಜಿಲ್ಲೆಯ ಎಲ್ಲ ಸರ್ಕಾರಿ ಹಿರಿಯ ಹಾಗೂ ಪ್ರಾಥಮಿಕ ಶಾಲೆಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಶಾಲಾ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೊಯಿಡಾ ತಾಲ್ಲೂಕಿನ, ನಂದಿಗದ್ದೆ, ಕುಂಡಲಗಾಂವ, ಮನಾಯಿ ಗ್ರಾಮಗಳಲ್ಲಿ ಹೆಚ್ಚುವರಿ ಕೋಠಡಿಗಳು.
ಹಳಿಯಾಳ ತಾಲ್ಲೂಕಿನ ನೀರಲಗಾ, ಶಿವಪೂರ, ವಟ್ನಾಳ, ಮುತ್ತಲಮುರಿ ಹಾಗೂ ಅಕ್ಕ ಮಹಾದೇವಿ ಹೆಣ್ಣು ಮಕ್ಕಳ ಪ್ರೌಢ ಶಾಲೆ, ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಶಾಲೆ, ಶಿವಾಜಿ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಸಹ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಮುಂಡಗೋಡದ ಕ್ಯಾತ್ನಳ್ಳಿ, ಯಲ್ಲಾಪುರದ ಅರಬೈಲ್, ಹಲಸ್ಕಂಡ, ತಾಟವಾಳ, ಶಿರಸಿ ತಾಲ್ಲೂಕಿನ ಹೆಗಡೆಕಟ್ಟಾ, ಸಿದ್ದಾಪುರದ ಹೊಸೂರ, ಹುಕ್ಕಳ್ಳಿ, ಕಡಕೇರಿಗಳಲ್ಲಿಯೂ ಸಹ ಕೊಠಡಿ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಅನುಮೋದಿಸಲಾಗಿದೆ’ ಎಂದರು.
‘ಸಾರ್ವಜನಿಕ ಶಿಕ್ಷಣ ಇಲಾಖೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ನಿರ್ಮಾಣ ಹಾಗೂ ದುರಸ್ಥಿಗಾಗಿ ಮುಂಡಗೋಡಕ್ಕೆ ₨5 ಲಕ್ಷ, ಯಲ್ಲಾಪುರ, ಅಂಕೋಲಾಕ್ಕೆ ತಲಾ ₨10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ನೂರು ವರ್ಷ ಪೂರ್ಣಗೊಳಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೂ ಸಹ ಮೂಲಭೂತ ಸೌಕರ್ಯ ಒದಗಿಸಲು ಸಹ ಜಿಲ್ಲೆಯ ಬಹುತೇಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಬೇಕಾಗಿರುವಂತಹ ಎಲ್ಲ ಸೌವಲತ್ತುಗಳನ್ನು ಪೂರೈಸ ಲಾಗಿದೆ.
ದಾಂಡೇಲಿಯಲ್ಲಿ 100 ಸಂಖ್ಯಾಬಲದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ಮಂಜೂರು ನೀಡಲಾಗಿದೆ. ಜಿಲ್ಲೆಯ ಅಂಕೋಲಾ, ಭಟ್ಕಳ, ಹೊನ್ನಾವರ, ಜೊಯಿಡಾ, ಕಾರವಾರ , ಹಳಿಯಾಳ, ಮುಂಡಗೋಡ ,ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳಲ್ಲಿನ ರಸ್ತೆಗಳ ಡಾಂಬರೀಕರಣ ಹಾಗೂ ಪುನರ್ ನಿರ್ಮಾಣಕ್ಕೂ ಸಹ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ಶೀಘ್ರದಲ್ಲಿಯೇ ರಸ್ತೆ ಸುಧಾರಣೆ ಕಾಮಗಾರಿಗಳು ಸಹ ಪ್ರಾರಂಭಗೊಳ್ಳಲಿದೆ’ ಎಂದರು. ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಘೋಟ್ನೇಕರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಕೊರ್ವೇಕರ ಉಪಸ್ಥಿತರಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.