ರಾಜರಾಜೇಶ್ವರಿನಗರ: ಕಂದಾಯ ಇಲಾಖೆಯ ಅನುಭವಿ ಅಧಿಕಾರಿಗಳನ್ನೇ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರನ್ನಾಗಿ ನೇಮಿಸಲಾಗುವುದು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ಪ್ರಸಾದ್ ತಿಳಿಸಿದರು.
ಕೆಂಗೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘ ಮತ್ತು ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಂದಾಯ ಅಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ನೇಮಕಾತಿಯಲ್ಲಿ ಗ್ರೇಡ್ ಪದ್ದತಿಯನ್ನು ರದ್ದುಗೊಳಿಸಲಾಗುವುದು. ಬದಲಿಗೆ ತಹಸೀಲ್ದಾರ್ ಮತ್ತು ವಿಶೇಷ ತಹಸೀಲ್ದಾರ್ ಎಂದು ಕರೆಯಲಾಗುವುದು ಎಂದು ಅವರು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಎಲ್ಲ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಜತೆಗೆ ಗ್ರಾಮ ಸಹಾಯಕರು, ಡಿ.ಗ್ರೂಪ್ ನೌಕರರಿಗೆ ಬಡ್ತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಸಚಿವರು ಎಂದು ಭರವಸೆ ನೀಡಿದರು.