ಲಕ್ಷ್ಮೇಶ್ವರ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಅವಶ್ಯಕತೆ ಇದೆ. ಆದರೆ ಅದರೊಂದಿಗೆ ಯುವ ಜನತೆಯಲ್ಲಿ ನೈತಿಕತೆ ಹೊಣೆಗಾರಿಕೆ ಬೆಳೆಸುವ ಶಿಕ್ಷಣವನ್ನು ಬೋಧಿಸಬೇಕು’ ಎಂದು ಮುಂಬೈನ ರಾಮಕೃಷ್ಣ ಮಿಷನ್ನ ಸರ್ವಲೋಕಾನಂದ ಸ್ವಾಮೀಜಿ ಹೇಳಿದರು.
ಅಗಡಿ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ 10ನೇ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
‘ಆಧ್ಯಾತ್ಮಿಕ ತಳಹದಿಯ ಮೇಲೆ ನಿರ್ಮಾಣವಾಗಿರುವ ಭಾರತಕ್ಕೆ ಜಗತ್ತಿನ ಯಾವ ರಾಷ್ಟ್ರವೂ ಸರಿ ಸಮಾನ ಆಗಲಾರದು. ಇಂದಿನ ಯುವ ಜನತೆ ಈ ಸತ್ಯವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ತಾಯಿ ನಾಡಿನ ಋಣ ತೀರಿಸಲು ನಿಷ್ಠೆಯಿಂದ ದೇಶ ಸೇವೆ ಮಾಡಲು ಮುಂದಾಗಬೇಕು. ಗ್ರಾಮೀಣ ಪ್ರದೇಶವಾಗಿರುವ ಲಕ್ಷ್ಮೇಶ್ವರದಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಿರುವ ಅಗಡಿ ಕುಟುಂಬದ ಸಾಧನೆ ನಿಜಕ್ಕೂ ಇತರರಿಗೆ ಮಾದರಿ ಆಗಿದೆ’ ಎಂದರು.
ಮುಂಬೈನ ಡಿಸಿಡಬ್ಲು ಸಾಫ್ಟ್ವೇರ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಮುದಿತ್ ಜೈನ್ ಮಾತನಾಡಿ, ‘ಮನುಷ್ಯನ ಬದುಕು ಸುಖದ ದಾರಿ ಅಲ್ಲ. ನಿರಂತರ ದುಡಿಮೆ ಹಾಗೂ ಪರಿಶ್ರಮ ಪಡುವವರಿಗೆ ಮಾತ್ರ ಈ ಜೀವನ ಸುಖ ನೀಡಬಲ್ಲದು. ಕೇವಲ ತಾಂತ್ರಿಕ ಶಿಕ್ಷಣ ಪಡೆಯುವುದೊಂದೇ ವಿದ್ಯಾರ್ಥಿಗಳ ಗುರಿಯಾಗಿರದೆ ಅದರೊಂದಿಗೆ ಜನ ಸೇವೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು. ಅಗಡಿ ಕಾಲೇಜಿನಲ್ಲಿ ವಿದ್ಯೆ ಕಲಿತ ಮಕ್ಕಳಿಗೆ ನಮ್ಮ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಮಾಡಿಕೊಡಲಾಗುವುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಹರ್ಷವರ್ಧನ ಅಗಡಿ ಮಾತನಾಡಿದರು. ಸಂಸ್ಥೆ ನಿರ್ದೇಶಕ ಡಾ.ಅರುಣ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಮಲಮ್ಮ ಅಗಡಿ, ಗೀತಾ ಅಗಡಿ, ಸೇರಿದಂತೆ ಮತ್ತಿತರರು ಹಾಜರಿದ್ದರು. ಡಾ.ಬಿ.ಎಂ. ಅಗಡಿ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಅಶೋಕ ಛಾಪಗಾಂವ್ ವಾರ್ಷಿಕ ವರದಿ ಮಂಡಿಸಿದರು. ಅನುಶ್ರೀ ಕಿಣಿ ಹಾಗೂ ಭಾಗ್ಯಶ್ರೀ ಮಠದ ನಿರೂಪಿಸಿದರು. ಪ್ರೊ.ಪ್ರಭಾಕರ ವಂದಿಸಿದರು.