ಹರಿಹರ: ರಾಜ್ಯದಲ್ಲಿ ಪ್ರಥಮ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿ ಜಾರಿಗೆ ತಂದ ಕೀರ್ತಿ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದು ಹರಪನಹಳ್ಳಿಯ ಉಪನ್ಯಾಸಕ ಪರಶುರಾಂ ಎಂ. ದೊಡ್ಮನಿ ಅಭಿಪ್ರಾಯಪಟ್ಟರು.
ನಗರದ ವೃತ್ತಿನಿರತ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ 153ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ಎಂಜಿನಿಯರ್್ಸ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಿಶ್ವೇಶ್ವರಯ್ಯ ಅವರ ಜೀವನ ಸಾಧನೆ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
1912ರಲ್ಲಿ ಮೈಸೂರು ಸಂಸ್ಥಾನದ ದಿವಾನ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ವಿಶ್ವೇಶ್ವರಯ್ಯ ತಮ್ಮ ಅಧಿಕಾರ ಅವಧಿಯಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟು, ಏಷ್ಯಾದಲ್ಲಿ ಮೊದಲ ಬಾರಿಗೆ ಜೋಗದ ಜಲ ವಿದ್ಯುತ್ ಉತ್ಪಾದನಾ ಕೇಂದ್ರ, ಎಚ್.ಎ.ಎಲ್, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೃಷಿ ಸಂಶೋಧನಾ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್, ಹಾಗೂ ಮೈ ಷುಗರ್ಸ್ ಕಾರ್ಖಾನೆ ಪ್ರಾರಂಭಿಸಿ ರಾಜ್ಯದ ಸಾವಿರಾರು ಜನರ ಬದುಕಿಗೆ ದಾರಿದೀಪವಾದರು ಎಂದು ಹೇಳಿದರು.
ದೇಶದ ಅಭಿವೃದ್ಧಿಯ ಅಡಿಪಾಯ ಹಾಕಿದ ಅವರ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಇಂದು ದೇಶದ ನಾಗರಿಕರು ಅವರ ಜನ್ಮ ದಿನಾಚರಣೆಯನ್ನು ಎಂಜಿನಿಯರ್್ಸ ದಿನಾಚರಣೆ ಎಂದು ಗೌರವಪೂರ್ವಕವಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದ್ದೆವೆ ಎಂದರು.
ದೇಶ ವಾಸಿಗಳ ಶಾಶ್ವತ ನೆರಳು ಕಲ್ಪಿಸುವ ಶಕ್ತಿ ಹೊಂದಿರುವ ಸಿವಿಲ್ ಎಂಜಿನಿಯರ್ಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ದೇಶದ ಪ್ರಗತಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಹಾಗೂ ನುರಿತ ಸಿವಿಲ್ ತಂತ್ರಜ್ಞ ಎ. ಮಲ್ಲಪ್ಪ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಸಿವಿಲ್ ವಿಭಾಗದಲ್ಲಿ ಶೇ. 83ರಷ್ಟು ಅಂಕಗಳಿಸಿದ ಜಿ.ಕೇಶವ್ ಅವರನ್ನು ಗೌರವಿಸಲಾಯಿತು.
ವೃತ್ತಿನಿರತ ಸಿವಿಲ್ ಎಂಜಿನಿಯರ್್ಸ ಅಸೋಸಿಯೇಷನ್ ಅಧ್ಯಕ್ಷ ಆರ್. ಡೆನ್ನಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಕೋಳೂರು, ಶಿವಪ್ರಕಾಶ್ ಶಾಸ್ತ್ರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರದ ವಾಸ್ತುಶಿಲ್ಪಿಗಳು, ಕಟ್ಟಡ ಸಾಮಗ್ರಿಗಳ ಮಾರಾಟಗಾರರು, ಗುತ್ತಿಗೆದಾರರು ಹಾಗೂ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.
ಗಾಯತ್ರಿ ಪ್ರಾರ್ಥಿಸಿದರು. ಎಂಜಿನಿಯರ್ ಗುರುನಾಥ್ ಸ್ವಾಗತಿಸಿದರು. ಕೆ.ಬಿ.ರಾಜಶೇಖರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.