ಚಾಮರಾಜನಗರ: ‘ಸರ್ಕಾರದಿಂದ ಕಾರ್ಡ್ ಪಡೆದಿರುವ ದಿನಗೂಲಿ ಕಾರ್ಮಿಕರಿಗೆ ಮಾತ್ರ ಕೆಲಸ ನೀಡಬೇಕು. ಜತೆಗೆ, ಕಾರ್ಮಿಕರು ಸರ್ಕಾರದಿಂದ ಲಭಿಸುವ ಸೌಲಭ್ಯ ಪಡೆಯಲು ಮುಂದಾಗಬೇಕು’ ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಪಿ. ರಾಜಪ್ಪ ಹೇಳಿದರು.
ನಗರದ ಶಿಕ್ಷಕರ ಭವನದಲ್ಲಿ ಇತ್ತೀಚೆಗೆ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘದ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಡ್ ಪಡೆದಿರುವ ದಿನಗೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡ್ ಪಡೆದುಕೊಂಡಿದ್ದರೂ, ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.
ಮೈಸೂರು ನಗರಕ್ಕೆ ದಿನನಿತ್ಯ ಸುಮಾರು 6 ಸಾವಿರ ದಿನಗೂಲಿ ನೌಕರರು ಕೆಲಸಕ್ಕೆ ಹೋಗುತ್ತಾರೆ. ಅವರಲ್ಲಿ ಸರ್ಕಾರದ ಕಾರ್ಡ್ ಪಡೆದುಕೊಂಡವರಿಗೆ ಮಾತ್ರ ಕೆಲಸ ನೀಡಬೇಕು. ಕೆಲಸ ನಿರ್ವಹಿಸುವ ವೇಳೆ ಅಪಘಾತ ಸಂಭವಿಸಿದರೆ ಅಂತಹವರಿಗೆ ಸರ್ಕಾರದ ಎಲ್ಲ ಸವಲತ್ತು ಲಭಿಸಲಿವೆ ಎಂದರು.
ಹಿರಿಯ ರಂಗಕರ್ಮಿ ಎಚ್.ಕೆ. ರಾಮನಾಥ್ ಮಾತನಾಡಿ, ‘ದಿನಗೂಲಿ ನೌಕರರು ಕೀಳರಿಮೆ ಬಿಡಬೇಕು, ಪ್ರತಿಯೊಬ್ಬರು ತಮ್ಮ ಜೀವನೋಪಾಯಕ್ಕಾಗಿ ಒಂದೊಂದು ಕೆಲಸ ಆಯ್ಕೆ ಮಾಡಿಕೊಂಡಿರುತ್ತಾರೆ. ಯಾವುದೇ, ಕಾರಣಕ್ಕೂ ನಿಮಗೆ ಸಿಗುವಂತಹ ಸವಲತ್ತು ಪಡೆಯಲು ಹಿಂದೇಟು ಹಾಕಬಾರದು’ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ನರಸಿಂಹಸ್ವಾಮಿ, ಗುತ್ತಿಗೆದಾರ ಮಹೇಶ್, ಕುಮಾರ್, ಬಿ. ಮಹದೇವಸ್ವಾಮಿ, ಮಹದೇವಸ್ವಾಮಿ, ಮಂಜು, ಪ್ರಕಾಶ್, ಮಂಗಳಗೌರಮ್ಮ ಹಾಜರಿದ್ದರು.