ಬೆಳ್ತಂಗಡಿ: ಕೃಷಿ ಪ್ರಧಾನ ಸಮಾಜ ಕೈಗಾರಿಕಾ ಪ್ರಧಾನ ಸಮಾಜವಾಗಿ ಪರಿವರ್ತನೆಗೊಂಡಿರುವುದರಿಂದ ಮನುಷ್ಯರ ನಡುವೆ ಶಾಂತಿ, ಮೆಮ್ಮದಿ ದೂರವಾಗುವಂತಾಗಿದೆ ಎಂದು ಮಂಗಳೂರು ಕಥೋಲಿಕ್ ಸಭಾದ ಪ್ರಾದೇಶಿಕ ನಿರ್ದೇಶಕ ಫಾ.ಜೆ.ಬಿ.ಕ್ರಾಸ್ತಾ ಹೇಳಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
‘ಕೃಷಿ ಪ್ರಧಾನ ಸಮಾಜದಲ್ಲಿ ನಮ್ಮ ಕುಟುಂಬಗಳಿಗೆ ಯಾವುದೇ ಸಮಸ್ಯೆಯಿರಲಿಲ್ಲ, ಕುಟುಂಬ ಸಾಮರಸ್ಯದಿಂದ ನಡೆಯುತ್ತಿತ್ತು, ಆದರೆ ಕೈಗಾರೀಕರಣದ ಪ್ರಭಾವದಿಂದ ಕುಟುಂಬ ಜೀವನ ಒಡೆಯುತ್ತಿದೆ, ಬಹುರಾಷ್ಟ್ರೀಯ ಕಂಪೆನಿಗಳು ರೈತರ ಜಾಗ, ಹೊಲ ಆಕ್ರಮಿಸಿದ್ದು ಕೃಷಿ ಅಪಾಯದಂಚಿನಲ್ಲಿದೆ’ ಎಂದರು.
ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮೀಜಿ, ಕೃಷಿ ಕಡಿಮೆಯಾಗಿ ರೋಗ ಜಾಸ್ತಿಯಾಗಿದೆ. ಕೃಷಿಗೆ ಪ್ರೋತ್ಸಾಹ ಸಿಗುತ್ತಿಲ್ಲ, ಕೃಷಿ ಮೇಳಗಳು ರೈತರ ಕಣ್ಣು ತೆರೆಸುವುದಕ್ಕಿಂತ ಸರ್ಕಾರದ ಕಣ್ಣು ತೆರೆಸಬೇಕು ಎಂದರು.
ಅಡಿಕೆ ನಿಷೇಧ– ಭಯ ಬೇಡ: ಶಾಸಕ ವಸಂತ ಬಂಗೇರ ಮಾತನಾಡಿ, ರೈತರು ಅಡಿಕೆ ನಿಷೇಧದ ಕುರಿತು ಆತಂಕ ಪಡಬೇಕಾಗಿಲ್ಲ, ಸರ್ಕಾರದೊಂದಿಗೆ ಚರ್ಚಿಸಿ ಅಡಿಕೆ ನಿಷೇಧವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಎಂ.ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಉತ್ಸವ ಸಮಿತಿ ಗೌರವಾಧ್ಯಕ್ಷ ಫಾ.ಲಾರೆನ್ಸ್ ಮಸ್ಕರೇನ್ಹಸ್, ಗೇರುಕಟ್ಟೆ ಪರಪ್ಪು ಮಸೀದಿ ಧರ್ಮಗುರು ಕೆ.ಎಂ ಹನೀಫ್ ಸಖಾಫಿ, ತಾ.ಪಂ. ಅಧ್ಯಕ್ಷ ಕೇಶವ ಎಂ, ಕಥೋಲಿಕ್ ಸಭಾದ ಪ್ರದೇಶ ಅಧ್ಯಕ್ಷ ನೈಜಿಲ್ ಪಿರೇರಾ, ಜಿ.ಪಂ.ಸದಸ್ಯೆ ತುಳಸಿ ಜಿ ಹಾರಬೆ, ಸೇಕ್ರೆಡ್ ಹಾರ್ಟ್ ಪಿಯು ಪ್ರಾಂಶುಪಾಲ ಮ್ಯಾಥ್ಯು ಎನ್.ಎಮ್, ತಾ.ಪಂ. ಸದಸ್ಯರಾದ ವಿನ್ಸೆಂಟ್ ಡಿಸೋಜ, ಜಯಂತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಲಯಾಧ್ಯಕ್ಷ ಸಂಜೀವ ಮಡಿವಾಳ, ತಾಲ್ಲೂಕು ಕೃಷಿ ಅಧಿಕಾರಿ ಕಿರಣ್ ಪ್ರಸಾದ್, ಗ್ರಾ.ಪಂ.ಅಧ್ಯಕ್ಷೆ ಸುಶೀಲ ಇದ್ದರು. ಕೃಷಿ ಉತ್ಸವ ಸಮಿತಿ ಗೌರವ ಸಲಹೆಗಾರ ವಿವೇಕ್ ವಿನ್ಸೆಂಟ್ ಪೈಸ್ ಸ್ವಾಗತಿಸಿ, ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ರೂಪ ಜೆ.ಜೈನ್ ವಂದಿಸಿದರು. ಬೆಳ್ತಂಗಡಿ ತಾಲ್ಲೂಕು ಶಿಕ್ಷಕ ಸಂಘದ ಅಧ್ಯಕ್ಷ ಧರಣೇಂದ್ರ.ಕೆ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಹಾಗೂ ನಾಗರಿಕರಿಂದ ಮಡಂತ್ಯಾರು ಪೇಟೆಯಿಂದ ಸೇಕ್ರೆಡ್ ಹಾರ್ಟ್ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.