ಮೂಡಬಾಗಿಲು: ಕ್ರೀಡಾಪಟುಗಳು ಕ್ರೀಡೆಯನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕೆಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.
ತಾಲ್ಲೂಕಿನ ಮೂಡಬಾಗಿಲು ಗ್ರಾಮದ ಜ್ಞಾನಗಂಗೋತ್ರಿ ಪ್ರೌಢಶಾಲೆಯ ಮೈದಾನದಲ್ಲಿ ಬುಧವಾರ ನಡೆದ ನರಸಿಂಹರಾಜಪುರ ಬ್ಲಾಕ್ ಮಟ್ಟದ ಪೈಕಾ ಮತ್ತು ದಸರಾ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜಕಾರಣವು ಒಂದು ರೀತಿ ಕ್ರೀಡೆಯಿದ್ದಂತೆ. ಚುನಾವಣೆಯ ಮುಗಿದ ಮೇಲೆ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ. ಗ್ರಾಮೀಣ ಕ್ರೀಡಾಕೂಟ ಗಳಿಂದ ಗ್ರಾಮೀಣ ಪ್ರದೇಶಗಳಲ್ಲಿನ ಯುವ ಪ್ರತಿಭೆ ಹೊರ ಬರಲು ಅವಕಾಶ ಲಭಿಸಲಿದೆ. ಈ ಕ್ರೀಡಾ ಕೂಟ ದಿಂದ ಗ್ರಾಮೀಣ ಪ್ರದೇಶದವರಿಗೆ ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ. ಪ್ರಸ್ತುತ ಕ್ರೀಡೆಗಳಲ್ಲಿ ಯುವಜನಾಂಗ ಆಸಕ್ತಿ ಕಳೆದು ಕೊಳ್ಳುತ್ತಿರುವುದು ವಿಷಾದದ ಸಂಗತಿ.
ಯುವಜನಾಂಗವನ್ನು ಕ್ರೀಡೆಯತ್ತ ಆಕರ್ಷಿಸುವ ಸಲುವಾಗಿ ಪ್ರಶಸ್ತಿ ಪತ್ರದೊಂದಿಗೆ ನಗದು ಕೊಡುವ ಪದ್ಧತಿ ಜಾರಿಗೆ ತರಲಾಗಿದ್ದು ಇದರಿಂದ ಕ್ರೀಡೆ ಬೆಳೆಯಲು ಸಹಾಯಕವಾಗಲಿದೆ ಎಂದರು.
ಪೈಕಾ ಕ್ರೀಡಾಧಿಕಾರಿ ಅನಿತಾ ಪ್ರಾಸ್ತಾವಿಕವಾಗಿ ಮಾತನಾಡಿ, ಪೈಕಾ ಗ್ರಾಮೀಣ ಕ್ರೀಡಾಕೂಟ 2008ರಲ್ಲಿ ಪ್ರಾರಂಭವಾಗಿದ್ದು, 2019ರವೇಳೆಗೆ ಇಡಿ ದೇಶದಾದ್ಯಂತ ವಿಸ್ತರಣೆಯಾಗಲಿದೆ. ಈ ಕ್ರೀಡಾಕೂಟವನ್ನು ರಾಷ್ಟ್ರಮಟ್ಟದವರೆಗೂ ನಡೆಸಲಾಗುತ್ತದೆ.
ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ವಿಜೇತರಿಗೆ ರೂ.120, ದ್ವಿತೀಯ ಸ್ಥಾನ ಪಡೆದವರಿಗೆ ರೂ.75 ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ.60 ನಗದು ಬಹುಮಾನ ನೀಡುವ ಹೊಸ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಕ್ರೀಡೆ ಬೆಳೆಯುವ ಆಶಯ ಹೊಂದಲಾಗಿದೆ. ಪೈಕಾ ಗ್ರಾಮೀಣ ಕೂಟದವತಿಯಿಂದ ಆಟದ ಮೈದಾನವನ್ನು ರಕ್ಷಿಸಲು ರೂ.1ಲಕ್ಷ ಅನುದಾನ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ ಉದ್ಘಾಟಿಸಿ ಮಾತನಾಡಿದರು.
ಬಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಮೌನೇಶ್ವರಾಚಾರ್, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸೀಮಾ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಬಿ.ಜಿ.ಮಾಳಮ್ಮನವರ್, ಶಾಲಾಭಿವೃದ್ಧಿ ಸಮಿತಿಯ ಸುರೇಶ್, ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್, ರಕ್ಷಿತಾ, ಲಲಿತಾ, ಶ್ರೀಕಾಂತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.