ಜೀ ಕನ್ನಡ ವಾಹಿನಿ ಈಗ ಮತ್ತೊಂದು ಸಾಮಾಜಿಕ ಧಾರಾವಾಹಿಯನ್ನು ನೋಡುಗರಿಗೆ ತಲುಪಿಸಲು ಸಿದ್ಧವಾಗಿದೆ. ಮದುವೆ ಎಂಬ ಮೂರಕ್ಷರದ ಅರ್ಥ ಗೊತ್ತಾಗುವ ಮೊದಲೇ ವಿಧವೆಯ ಪಟ್ಟ ಧರಿಸುವ ಒಬ್ಬ ಮುಗ್ಧ ಬಾಲಕಿಯ ಕಥೆಯನ್ನು ಗಂಗಾ ಧಾರಾವಾಹಿಯಲ್ಲಿ ಹೇಳಲಾಗಿದೆ.
ತಾನು ಹಾಗೂ ತನ್ನ ತಂದೆ, ಇದಿಷ್ಟೇ ತನ್ನ ಪ್ರಪಂಚ ಎಂದು ತಿಳಿದಿದ್ದ ಮುಗ್ಧ ಬಾಲಕಿ ಗಂಗಾಳಿಗೆ, ಕಾರಣಾಂತರಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿರುತ್ತದೆ. ಅವಳಿಗೆ ಅದರ ಬಗ್ಗೆ ಅರಿವಾಗುವ ಮುನ್ನವೇ ವಿಧವೆಯಾಗುತ್ತಾಳೆ. 8–9 ವರ್ಷದ ಒಬ್ಬ ಪುಟ್ಟ ಮಗು ತನ್ನ ಜೀವನದಲ್ಲಿ ಆದ ಆಘಾತವನ್ನು ಸಹಿಸಿಕೊಂಡು ಹೇಗೆ ತನ್ನ ಜೀವನವನ್ನು ಆಶಾಭಾವದಿಂದ ಎದುರಿಸುತ್ತಾಳೆ, ತಂದೆ ಹೇಳಿಕೊಟ್ಟ ಜೀವನ ಪಾಠಗಳನ್ನು ಹೇಗೆ ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಎ ಲ್ಲ ಸಮಸ್ಯೆಗಳಿಂದ ಹೊರಬರುತ್ತಾಳೆ ಎಂಬುದೇ ಈ ದೈನಿಕ ಧಾರಾವಾಹಿಯ ಕಥಾ ಎಳೆ.
ಗಂಗಾ ತನ್ನ ಮುಗ್ಧತೆಯಿಂದ ಸಮಾಜದ ಪಿಡುಗುಗಳನ್ನು, ಶಾಸ್ತ್ರ ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಾಳೆ. ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರ ಹುಡುಗಿಯಾದ ಗಂಗಾ, ಉತ್ತರ ಕರ್ನಾಟಕದ ವಾಡೆ ಮನೆಗೆ ಏಕೆ ಹೋಗುತ್ತಾಳೆ? ಅಲ್ಲಿನ ಕಟ್ಟುಪಾಡುಗಳಿಗೆ ಬದ್ಧಳಾಗಿ, ಮಾನವೀಯತೆ, ಸತ್ಯ, ನ್ಯಾಯ, ನೀತಿ, ನಿಷ್ಠೆಯ ಪರವಾಗಿ ಹೇಗೆ ನಿಲ್ಲುತ್ತಾಳೆ ಎಂದು ಹಂತ ಹಂತವಾಗಿ ಇಲ್ಲಿ ನಿರ್ದೇಶಕರು ನಿರೂಪಿಸಿದ್ದಾರೆ.
ಆರ್. ಆರ್. ಆರ್. ಕ್ರಿಯೇಷನ್ಸ್ ಸಂಸ್ಥೆ ಈ ಹೊಸ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ‘ಮುಂಗಾರು ಮಳೆ’, ‘ಕೆಂಪೇಗೌಡ’, ‘ಗಜಕೇಸರಿ’ ಚಿತ್ರಗಳ ಖ್ಯಾತಿಯ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ, ಹಲವಾರು ನುರಿತ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಇದೇ ಮಾರ್ಚ್ 18ರಿಂದ, ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಗಂಗಾ ಧಾರಾವಾಹಿ ಪ್ರಸಾರವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.