ಬೆಂಗಳೂರು: ‘ವಿಶ್ವದ ಎಲ್ಲ ಭಾಷೆಗಳಿಗೆ ಹೋಲಿಸಿದರೆ ಕನ್ನಡವು ಅತ್ಯಂತ ಶ್ರೀಮಂತವಾದ ಭಾಷೆ. ಜಗತ್ತಿನ ಭಾಷೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಸಾಮರ್ಥ್ಯ ಕನ್ನಡ ಭಾಷೆಗಿದೆ’ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು.
ಮೈಕೊ ಒಕ್ಕಲಿಗರ ಕ್ರಿಯಾ ಸಮಿತಿಯ ಬೆಳ್ಳಿ ಹಬ್ಬದ ಅಂಗವಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ರಜತ ರತ್ನ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ದಲ್ಲಿ ಅವರು ಮಾತನಾಡಿದರು.
‘ಕನ್ನಡದಲ್ಲಿರುವ ವಚನ ಸಾಹಿತ್ಯವನ್ನು ಬೇರೆ ಯಾವ ಭಾಷೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ವಿಶಿಷ್ಟವಾದ ಯಕ್ಷಗಾನ ಕಲೆಯಲ್ಲಿ 4,500ಕ್ಕೂ ಅಧಿಕ ಪ್ರಸಂಗಗಳನ್ನು ಕಾಣಬಹುದು. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಗ್ಗಳಿಕೆ’ ಎಂದರು.
‘ಕನ್ನಡ ಸಾಹಿತ್ಯವನ್ನು ಹೆಚ್ಚು ಪ್ರಚಾರ ಮಾಡುವ ಮೂಲಕ ಜ್ಞಾನವನ್ನು ಹರಡುವ ಕೆಲಸವನ್ನು ಸಮಿತಿಯು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ‘ಮೈಕೊ ಒಕ್ಕಲಿಗರ ಕ್ರಿಯಾ ಸಮಿತಿಯು ಕಳೆದ 25 ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಅಂತರರಾಷ್ಟ್ರೀಯ ಕಂಪೆನಿಗಳು ರಾಜ್ಯವನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಬಂಡವಾಳ ಹೂಡುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಹೆಚ್ಚು ಉದ್ಯೋಗಾವ ಕಾಶಗಳು ಸೃಷ್ಟಿಯಾಗಬೇಕಾದರೆ ಹೆಚ್ಚು ಹೆಚ್ಚು ಕಂಪೆನಿಗಳು ರಾಜ್ಯದಲ್ಲಿ ಸ್ಥಾಪನೆ ಯಾಗಬೇಕಿದೆ. ಆ ನಿಟ್ಟಿನಲ್ಲಿ ಸೌಹಾರ್ದ ಯುತ ವಾರಾವರಣವನ್ನು ಕಲ್ಪಿಸಬೇಕಾ ದ ಅಗತ್ಯವಿದೆ’ ಎಂದು ಹೇಳಿದರು.
ದೇಜಗೌ ಅಸಮಾಧಾನ
ಸಮಾರಂಭಕ್ಕೆ ಬಾರದೇ ಸಂಘಟಕರನ್ನು ಮೂರು ಗಂಟೆಗಳಷ್ಟು ಕಾಯಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದೇ.ಜವರೇಗೌಡ, ‘ಬರದೆ ಇರುವ ಅತಿಥಿಗಳಿಗಾಗಿ ಕಾದು ಸಮಯವನ್ನು ವ್ಯರ್ಥ ಮಾಡದೆ ನಿಗದಿಪಡಿಸಿದ ವೇಳೆಗೆ ಸರಿಯಾಗಿ ಕಾರ್ಯ ಕ್ರಮವನ್ನು ಆರಂಭಿಸ ಬೇಕು. ಅಮೂಲ್ಯ ಸಮಯವನ್ನು ಹಾಳು ಮಾಡು ವುದು ದೊಡ್ಡ ಅಪರಾಧ. ಅತಿಥಿಗಳಾದವರಿಗೆ ತಾವು ಬರುತ್ತೇವೆಂದು ಒಪ್ಪಿಕೊಂಡ ಕಾರ್ಯಕ್ರಮದ ಬಗ್ಗೆ ಅರಿವಿ ರಬೇಕು. ಒಂಬತ್ತು ಗಂಟೆಯ ಕಾರ್ಯಕ್ರಮಕ್ಕೆ ನಾನು ನಾಲ್ಕು ಗಂಟೆಗೆ ಎದ್ದು ಮೈಸೂರಿನಿಂದ ಬಂದಿದ್ದೇನೆ. ಆದರೆ, ದೊಡ್ಡ ವ್ಯಕ್ತಿಗಳೆನಿಸಿ ಕೊಂಡವರು ಕಾರ್ಯಕ್ರಮಕ್ಕೆ ಒಪ್ಪಿಕೊಂಡು ಈ ರೀತಿ ಬಾರದೇ ಕಾಯಿಸುವುದು ಸರಿಯಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.