ಮೂಡಿಗೆರೆ: ರೈತನಿಗೆ ಬಹುಉಪಯೋಗಿಯಾಗಿ ಆರ್ಥಿಕ ನೆರವು ನೀಡುವ ತೆಂಗಿನ ಬೆಳೆಯಲ್ಲಿ ಯಶಸ್ವಿಗೆ ಸೂಕ್ತ ಹಾರೈಕೆ ಅಗತ್ಯ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ಸಹ ನಿರ್ದೇಶಕ ಡಾ.ರಂಗಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಹ್ಯಾಂಡ್ಪೋಸ್ಟಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಯುವ ರೈತರಿಗಾಗಿ ನಡೆಯುತ್ತಿರುವ ಆರು ದಿನಗಳ ತೆಂಗಿನ ಬೆಳೆ ಕಾರ್ಯಾಗಾರದಲ್ಲಿ ಬುಧವಾರ ಏರ್ಪಡಿಸಿದ್ದ ತೆಂಗಿನ ಬೆಳೆಯ ಸಾಧನ ಯಂತ್ರಗಳ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡಿದರು.
ತೆಂಗು ರೈತರಿಗೆ ಬಹುವಾರ್ಷಿಕ ಹಾಗೂ ಬಹು ಉಪಯೋಗಿ ಬೆಳೆಯಾಗಿದ್ದು, ಈ ಕೃಷಿಯಲ್ಲಿ ಬೆಳೆಯ ಹಾರೈಕೆಗೆ ಹೆಚ್ಚಿನ ಒತ್ತು ಅಗತ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ತೆಂಗಿನ ಮರಗಳಿಗೆ ನುಸಿರೋಗ, ಕಾಯಿ ಉದುರುವಿಕೆಯಂತಹ ರೋಗಗಳು ರೈತರಿಗೆ ಸಂಕಷ್ಟ ಸೃಷ್ಟಿಸಿದ್ದು, ಸೂಕ್ತ ಹಾರೈಕೆ ಮಾಡಿ ರೋಗ ತಗುಲದಂತೆ ಎಚ್ಚರವಹಿಸಬೇಕು ಎಂದರು. ತೆಂಗಿನ ಬೆಳೆಯಲ್ಲಿ ಮರಗಳಿಗೆ ತಗುಲುವ ರೋಗರುಜಿನಗಳು ಒಂದೆಡೆ ರೈತರಿಗೆ ಒಂದೆಡೆ ಸಂಕಷ್ಟ ನೀಡಿದರೆ, ಇನ್ನೊಂದೆಡೆ ಎತ್ತರದ ಮರಗಳಿಗೆ ಹತ್ತಿ ಔಷಧಿ ಸಿಂಪಡಣೆ, ಬೆಳೆ
ಕಟಾವಿನಂತಹ ಸಮಸ್ಯೆಗಿದ್ದು, ಅಂತಹ ಸಮಸ್ಯೆಗಳ ನಿವಾರಣೆಗಾಗಿ ಹೊಸ ವಿಧಾನಗಳು, ಯಂತ್ರಗಳು ಲಭ್ಯವಿದ್ದು, ಅವುಗಳ ಮೂಲಕ ಕೃಷಿಯ ಸುಲಭತೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ತೆಂಗು ಅಭಿವೃದ್ದಿ ಮಂಡಳಿಯ ತರಬೇತುದಾರರಾದ ಕಾಂತರಾಜು ಹಾಗೂ ಮಾದಸ್ವಾಮಿ ಯುವ ರೈತರಿಗೆ ಯಂತ್ರಗಳ ಪ್ರಾತ್ಯಕ್ಷಿಕೆ ನೀಡಿದರು. ಕೇಂದ್ರದ ಡಾ. ಯೋಗೀಶ್ ಆರಾಧ್ಯ, ಡಾ. ಸತೀಶ್, ಭರತ್ ಇದ್ದರು.