ಚಿಂತಾಮಣಿ: ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯ ಮೇಲೆ ಸವಾರಿ ಮಾಡುವುದು ಸರಿಯಲ್ಲ. ಪ್ರಕೃತಿ ಮತ್ತು ಮಾನವನ ನಡುವೆ ಸಮನ್ವಯತೆ ಇರದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಪ್ರವಚನಕಾರ ಟಿ.ಎಲ್.ಆನಂದ್ ಹೇಳಿದರು.
ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಮಂಗಳವಾರ ಹುಣ್ಣಿಮೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಕೃತಿ ಮತ್ತು ಮಾನವ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದರು.
ಅನಾದಿ ಕಾಲದಿಂದಲೂ ಮಾನವನನ್ನು ಪೋಷಿಸುತ್ತಾ ಬಂದಿರುವ ದೈವಸ್ವರೂಪಿ ಪ್ರಕೃತಿಯ ಮೇಲೆ ಮಾನವನ ದಾಳಿ ಅತಿಯಾಗಿದೆ. ಪ್ರಾಚೀನ ಕಾಲದಲ್ಲಿ ಪೂರ್ವಿಕರು ಹಣ್ಣಿನ ಹಾಗೂ ನೆರಳು ಕೊಡುವ ಮರಗಳಿಗೆ ಕೊಡಲಿ ಹಾಕುತ್ತಿರಲಿಲ್ಲ. ಹಸಿವು ಮತ್ತು ಆಯಾಸವನ್ನು ತಣಿಸುವ ಪರೋಪಕಾರಿ ಮರಗಳನ್ನು ಕಡಿಯುವುದು ಮಹಾಪಾಪ ಎನ್ನುವ ಸಂಪ್ರದಾಯ ರೂಡಿಸಿಕೊಂಡಿದ್ದರು ಎಂದು ತಿಳಿಸಿದರು.
ಮನುಷ್ಯ ವೈಜ್ಞಾನಿಕವಾಗಿ ಮುಂದುವರಿದಂತೆ ಸಾವಿರಾರು ಎಕರೆ ಸಮೃದ್ಧ ಕಾಡು ನೆಲಸಮವಾಗಿವೆ. ಕಾರ್ಖಾನೆಗಳ ಹೊಲಸು ನೀರನ್ನು ನದಿಗಳಿಗೆ ಮತ್ತು ಸಮುದ್ರಗಳಿಗೆ ಹರಿಸುತ್ತಿದ್ದೇವೆ. ತಾತ್ಕಾಲಿಕ ಸುಖಕ್ಕಾಗಿ ಪ್ರಕೃತಿಯಲ್ಲಿ ಜೀವಿಸುವ ಜೀವಿಗಳ ಹಕ್ಕುಗಳನ್ನು ಕಸಿಯುತ್ತಿರುವುದು ದುರಂತ ಎಂದರು.
ಉತ್ಸವದ ಅಂಗವಾಗಿ ಬೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಯತೀಂದ್ರರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ ನೆರವೇರಿಸಲಾಯಿತು. ನೂರಾರು ಜನರ ಸಮ್ಮುಖದಲ್ಲಿ ಉತ್ಸವ ಮೂರ್ತಿಯ ರಥೋತ್ಸವ ನಡೆಸಲಾಯಿತು.