ಉಜಿರೆ: ಭಜನೆಯಿಂದ ಉತ್ತಮ ಸಂಸ್ಕಾರ ದೊರಕಿ ಆತ್ಮಬಲ ವೃದ್ಧಿಯಾಗುತ್ತದೆ. ನಮ್ಮಲ್ಲಿ ನವ ಚೈತನ್ಯ ಮೂಡಿಬರುತ್ತದೆ. ನಾವು ಸದಾ ಸುಖಿಗಳಾಗಿ ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಳ್ಳಲು ಭಜನೆ ಸಹಕಾರಿಯಾಗಿದೆ ಎಂದು ಚಿಕ್ಕಮಗಳೂರಿನ ಹಿರೇಮಗಳೂರು ಕಣ್ಣನ್ ಹೇಳಿದರು.
ಧರ್ಮಸ್ಥಳದಲ್ಲಿ 15ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಜನೆ ಮೂಲಕ ಮನಸ್ಸಿನ ತಲ್ಲಣಗಳನ್ನು ದೂರ ಮಾಡಿ ಶಾಂತಿ, ಸಮಾಧಾನ ಪಡೆಯಬಹುದು. ಭಗವಂತನನ್ನು ಸ್ಪರ್ಶಿಸಿ, ಅನುಭವಿಸಿ ಆನಂದಿಸಲು ಭಜನೆ ಸರಳ ಮಾಧ್ಯಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡಿ, ಭಕ್ತಿ, ಪ್ರೀತಿ ಮತ್ತು ವಿಶ್ವಾಸದಿಂದ ಭಜನೆ ಮಾಡಿದರೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಭಜನೆಯಿಂದ ಬದುಕಿನಲ್ಲಿ ಮಹತ್ತರ ಬದಲಾವಣೆಯಾಗುತ್ತದೆ. ಭಜನಾ ಪಟುಗಳು ಸಾಮಾಜಿಕ ಪರಿವರ್ತನೆಯ ರೂವಾರಿಗಳಾಗಬೇಕು. ತಮ್ಮ ಊರಿನಲ್ಲಿ ಧನಾತ್ಮಕ ಪರಿವರ್ತನೆಯ ನಾಯಕರಾಗಬೇಕು. ಅಚಲ ವಿಶ್ವಾಸದಿಂದ ಭಜನೆ ಮಾಡಿದಾಗ. ಭಗವಂತನ ನಾಮಸ್ಮರಣೆ ಮಾಡಿದಾಗ ಮನಸ್ಸು ಪವಿತ್ರವಾಗಿ ನಮ್ಮಲ್ಲಿ ದೈವಿಕತೆ ಮೂಡಿಬರುತ್ತದೆ ಎಂದು ಹೇಳಿ
ದರು.
ಒಂದು ವಾರ ನಡೆಯುವ ತರಬೇತಿ ಕಮ್ಮಟದಲ್ಲಿ 5 ಜಿಲ್ಲೆಗಳಿಂದ 85 ಭಜನಾ ಮಂಡಳಿಗಳ 160 ಮಂದಿ ಸದಸ್ಯರು ಭಾಗವಹಿಸುತ್ತಿದ್ದಾರೆ.