ಕಡಬ (ಉಪ್ಪಿನಂಗಡಿ): ಭಾರತೀಯ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿರುವ ಇಂದು ಅದರ ಉಳಿವಿಗಾಗಿ ಪ್ರಯತ್ನ ಅಗತ್ಯವಾಗಿದೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.
ಗುರುವಾರ ಇಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಕಡಬ ಘಟಕದ ಉದ್ಘಾಟನೆ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ನೆಲದ ಭಾಷೆ, ಸಂಸ್ಕೃತಿ, ಕಲೆ ವಿಶ್ವಕ್ಕೆ ಮಾದರಿಯಾಗಿದೆ. ಶ್ರೀಮಂತಿಕೆ ಪಡೆದ ಜಾನಪದ ಕಲೆಗಳ ವೈಭವ ಜನಮಾನಸದಿಂದ ಮಾಸುವ ಮುನ್ನ ಅದರ ಬಗ್ಗೆ ಜಾಗೃತಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿಯ ಅನಾವರಣ ನಡೆಯಲಿದೆ. ಈ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ವಿಶ್ವ ನುಡಿಸಿರಿ ಘಟಕಗಳನ್ನು ಪ್ರಾರಂಭಿಸಿಲಾಗುತ್ತಿದೆ, ಇದಕ್ಕೆ ಎಲ್ಲೆಡೆ ಬೆಂಬಲ ಸಿಗುತ್ತಿದೆ ಎಂದರು.
ಕೃಷಿಕ ರಾಜರತ್ನ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಪಿಲಿಫ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಗೋಪಾಲ್ ರಾವ್, ಸೇಂಟ್ ಜೋಕಿಮ್ಸ್ ಚರ್ಚ್ ಧರ್ಮಗುರು ಅಲೆಕ್ಸಾಂಡರ್ ಲೂವಿಸ್, ಕಡಬ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಕಡಬ ರೋಟರಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಚ್ಚುತ ಪ್ರಭು, ಬೊಳ್ಳೂರು ಷಣ್ಮುಖ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣ ಭಟ್ ಕಲ್ಪುರೆ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಬೆಳ್ಳಿಪ್ಪಾಡಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಡಬ ಗ್ರಾ.ಪಂ.ಅಧ್ಯಕ್ಷ ಕೆ.ಎಂ. ಹನೀಫ್, ಆಳ್ವಾಸ್ ವಿಶ್ವ ನುಡಿಸಿರಿ ಕಡಬ ಘಟಕದ ಸದಸ್ಯೆ ದಯಾಮಣಿ ರೈ ಇತರರು ಇದ್ದರು.
ಘಟಕದ ಅಧ್ಯಕ್ಷ ದಯಾನಂದ ಪ್ರಭು ಸ್ವಾಗತಿಸಿ, ಕಾರ್ಯದರ್ಶಿ ರಮೇಶ್ ಕಲ್ಪುರೆ ವಂದಿಸಿದರು. ಲಕ್ಷ್ಮೀನಾರಾಯಣ ರಾವ್ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.