ಭಾಲ್ಕಿ: ತಾಲ್ಲೂಕಿನ ಆಯ್ದ ಸರ್ಕಾರಿ ಶಾಲೆಗಳಲ್ಲಿ ಗಣಕ ಯಂತ್ರಗಳನ್ನು ಅಳವಡಿಸುವ ಮೂಲಕ ಕೆಲವು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹ ನೀಡಿತ್ತು. ಆದರೆ ಸಿಬ್ಬಂದಿಗಳ ಕೊರತೆ ಮತ್ತು ಶಿಕ್ಷಕರ ಅನಾಸಕ್ತಿಯ ಪರಿಣಾಮವಾಗಿ ಈಗ ಅನೇಕ ಶಾಲೆಗಳಲ್ಲಿ ಕಂಪ್ಯೂಟರ್ಗಳು ಧೂಳು ತಿನ್ನುತ್ತಿವೆ.
ಸರ್ಕಾರ ಈ ಕೇತ್ರದಲ್ಲಿ ಹೂಡಿದ ಕೋಟ್ಯಂತರ ಹಣ ಮೂಲ ಉದ್ದೇಶಕ್ಕೆ ಬಳಕೆಯಾಗದೇ ಹಾಳಾಗುತ್ತಿವೆ ಎನ್ನುವುದು ಪಾಲಕರ ಆರೋಪ.
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯುತ್, ಬ್ಯಾಟರಿ, ವಿಶೇಷ ಪೀಠೋಪಕರಣ ಮುಂತಾದ ಸೌಕರ್ಯಗಳಿರುವ ವಿಶೇಷ ಕೋಣೆಯೊಂದನ್ನು ನಿರ್ಮಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಎನ್ಜಿಓದಿಂದ ಆಯ್ಕೆ ಮಾಡಿದ ಮಾಹಿತಿ ಸಿಂಧು ಶಿಕ್ಷಕರು ಕೆಲವು ದಿನಗಳವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು. ಆದರೆ 2 ವರ್ಷಗಳಿಂದ ಬಹುತೇಕ ಶಾಲೆಗಳಲ್ಲಿ ಗಣಕ ಯಂತ್ರ ಶಿಕ್ಷಕರಿಲ್ಲದೇ ಲಕ್ಷಾಂತರ ಮೊತ್ತದ ಕಂಪ್ಯೂಟರ್ಗಳು ಮೂಲೆ ಸೇರಿವೆ. ಬಹುತೇಕ ಶಾಲೆಗಳಲ್ಲಿ ಬಳಕೆಯಲ್ಲಿ ಇಲ್ಲದೇ ಧೂಳು ತಿನ್ನುತ್ತಿವೆ ಎನ್ನುತ್ತಾರೆ ಮೆಹಕರ್ ಸಿಇಸಿ ಸದಸ್ಯರಾಗಿರುವ ಗುಂಡಪ್ಪ ಆಗ್ರೆ .
ಈಚೆಗೆ ನಡೆದ ಮಕ್ಕಳ ಗಣತಿ ಮಾಹಿತಿಗಳನ್ನು ಶಾಲೆಗಳಲ್ಲಿರುವ ಗಣಕಯಂತ್ರ ಬಳಸಿಕೊಂಡು ತುಂಬಲು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಆದರೆ ಎಲ್ಲಿಯೂ ಕಂಪ್ಯೂಟರ್ಗಳು ಸುಸ್ಥಿತಿಯಲ್ಲಿ ಇಲ್ಲದ ಕಾರಣ ಮತ್ತು ತರಬೇತಿ ಪಡೆದ ಶಿಕ್ಷಕರು ಇಲ್ಲದಿರುವುದರಿಂದ ಸಾಧ್ಯವಾಗಿಲ್ಲ ಎಂದು ಭಾನುದಾಸ ಕಾರಬಾರಿ ದೂರುತ್ತಾರೆ.
ಕಂಪ್ಯೂಟರ್ಗಳು ವಿದ್ಯಾರ್ಥಿಗಳ ಅನುಕೂಲಕ್ಕೆ ಸದ್ಬಳಕೆಯಾಗುವಂತೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಶಾಲೆಗಳ ಮುಖ್ಶಶಿಕ್ಷಕರು ಒತ್ತಾಯಿಸಿದ್ದಾರೆ.