ಮಂಡ್ಯ: ಮೂಢನಂಬಿಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೆ ಒಳಗಾಗುವವರು ಮಹಿಳೆಯರು. ಮೌಢ್ಯಾಚರಣೆ ಪ್ರತಿಬಂಧಕ ಕರಡು ಅವರ ಪಾಲಿನ ಭಾಗ್ಯೋದಯವಾಗಿದೆ ಎಂದು ವಿಧೇಯಕ ಕರಡು ರಚನಾ ಸಮಿತಿ ಸದಸ್ಯ, ಸಾಹಿತಿ ಡಾ.ಅರವಿಂದ ಮಾಲಗತ್ತಿ ಹೇಳಿದರು.
ಮೌಢ್ಯಾಚರಣೆ ವಿರೋಧಿ ಸಮಿತಿ ವತಿಯಿಂದ ಗುರುವಾರ ನಗರದ ಗಾಂಧಿ ಭವನದಲ್ಲಿ ಮೌಢ್ಯಾಚರಣೆ ಪ್ರತಿಬಂಧಕ ವಿಧೇಯಕ ಜಾರಿಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಢನಂಬಿಕೆಗೆ ನಿಷೇಧ ಹೇರುತ್ತಿಲ್ಲ. ಇನ್ನು ನಂಬಿಕೆಗಳಿಗೆ ನಿಷೇಧ ಹೇರಲು ಸಾಧ್ಯವೇ? ಇನ್ನೊಬ್ಬರಿಗೆ ಅಪಾಯ ತರುವ ಆಚರಣೆಗಳನ್ನು ಮಾತ್ರ ನಿಷೇಧಿಸುವಂತೆ ಮೌಢ್ಯಾಚರಣೆ ಪ್ರತಿಬಂಧಕ ಕರಡಿನಲ್ಲಿ ಸೂಚಿಸಲಾಗಿದೆ ಎಂದರು.
ಕರಡು ಸಮಿತಿಯ ಸದಸ್ಯ ಬಾಲಗುರುಮೂರ್ತಿ ಮಾತನಾಡಿ, ನರಬಲಿ, ಭಯ ಉಂಟು ಮಾಡುವುದು, ಮಕ್ಕಳಿಗೆ ಹಾನಿ ಮಾಡುವುದು, ಬೆತ್ತಲೆ ಸೇವೆ, ಮಡೆ ಮಡೆಸ್ನಾನದಂತಹ ಆಚರಣೆಗಳ ವಿರುದ್ಧ ಕಾಯ್ದೆ ಜಾರಿಗೆ ತರುವಂತೆ ಕರಡಿನಲ್ಲಿ ತಿಳಿಸಲಾಗಿದೆ ಎಂದರು.
ಸಮಿತಿ ಸಂಚಾಲಕ ಲಕ್ಷ್ಮಣ ಚೀರನಹಳ್ಳಿ ಮಾತನಾಡಿ, ಎಲ್ಲ ಧರ್ಮಗಳಲ್ಲಿಯೂ ಮೌಢ್ಯಾಚರಣೆ ಇದೆ. ಪುರೋಹಿತಶಾಹಿಗಳು, ಮಠಾಧೀಶರು ಇದನ್ನು ತಡೆಯಲು ವಿರೋಧಿಸುತ್ತಿದ್ದಾರೆ. ಕರಡು ಜಾರಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ರೂಪಾ ಮತ್ತಿಕೆರೆ, ಹುರುಗಲವಾಡಿ ರಾಮಯ್ಯ ಇದ್ದರು. ನಂತರ ಸಂವಾದ ನಡೆಯಿತು.