ಬ್ಯಾಡಗಿ: ‘ಸ್ವಾತಂತ್ರ್ಯ ಯೋಧರ ಹೋರಾಟ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಇಂದಿನ ಯುವಕರ ಕರ್ತವ್ಯವಾಗಿದೆ’ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಅಭಿಪ್ರಾಯಪಟ್ಟರು. ಪಟ್ಟಣದ ಮುಪ್ಪಿನಸ್ವಾಮಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಷಡಕ್ಷರಪ್ಪ ಮಹಾರಾಜಪೇಟೆ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಿವೆ’ ಎಂದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ‘ಶಾಂತಿ ಅಹಿಂಸೆಯನ್ನು ಮುಂದಿಟ್ಟುಕೊಂಡು ಸತ್ಯಾಗ್ರಹಗಳ ಮೂಲಕ ಬ್ರಿಟೀಷರನ್ನು ದೇಶದಿಂದ ಹೊರಹಾಕಲಾಯಿತು. ಇಂತಹ ಹೋರಾಟ ನಡೆಸಿದವರಲ್ಲಿ ಷಡಕ್ಷರಪ್ಪ ಪ್ರಮುಖರಾಗಿದ್ದರು’ ಎಂದರು.
ಉಪನ್ಯಾಸಕ ಡಾ.ಪ್ರೇಮಾನಂದ ಲಕ್ಕಣ್ಣನವರ ನುಡಿ ಸೇವೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ಪರಮಗೌಡ ಹರಕಂಗಿ, ತಹಶೀಲ್ದಾರ್ ಶಿವಶಂಕರ ನಾಯಕ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಹೋತನಹಳ್ಳಿ ಶಂಕರಾನಂದ ಸ್ವಾಮೀಜಿ ಮಾತನಾಡಿ, ‘ಹೆರಿಲ್ಲದೆ ಉದರದಲ್ಲಿ ಜನಿಸುವ ಮನುಷ್ಯ ದೇಹವನ್ನು ಬಿಡುವಾಗ ಹೆಸರನ್ನಷ್ಟೆ ಬಿಟ್ಟು ಹೋಗಲಿದ್ದಾನೆ. ಸ್ವಾರ್ಥ ಹಾಗೂ ದ್ವೇಷ ಮನೋಭಾವನೆಗಳು ಎಲ್ಲಿವರೆಗೆ ಮನುಷ್ಯನನ್ನು ಬಿಟ್ಟು ಹೋಗುವುದಲ್ಲವೋ ಅಲ್ಲಿಯವರೆಗೆ ಲೌಕಿಕ ಜೀವನದಲ್ಲಿ ನೆಮ್ಮದಿ ಸಿಗುವುದಿಲ್ಲ’ ಎಂದು ಹೇಳಿದರು.
ವೇದಿಕೆಯಲ್ಲಿ ಗುಡ್ಡದ ಆನ್ವೇರಿ ಶಿವಯೋಗಿ ಸ್ವಾಮೀಜಿ, ಮಳ್ಳಪ್ಪ ಕೊಪ್ಪದ, ಮಹಾಂತೇಶ ಮೇಲ್ಮುರಿ, ಸಾಹಿತಿಗಳಾದ ಗಂಗಾಧರ ನಂದಿ, ಸಂಕಮ್ಮ ಸಂಕಣ್ಣನವರ, ನಿವೃತ್ತ ಪ್ರಾಚಾರ್ಯರಾದ ಎಸ್.ಬಿ.ತವರದ, ಎಸ್.ಎ.ಗೌಡರ, ಪ್ರಾಚಾರ್ಯ ಡಾ.ಆರ್.ಎಂ.ಕುಬೇರಪ್ಪ, ಕಾರ್ಯನಿತರ ಪತ್ರಕರ್ತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಚಾವಡಿ, ಗುರುರಾಜ ಶಿರಹಟ್ಟಿ, ಎಸ್.ಪಿ.ಕುಲ್ಕರ್ಣಿ, ಪುರಸಭೆ ಸದಸ್ಯರಾದ ಮರಿಗೆಪ್ಪ ಶೆಟ್ಟರ್, ಪ್ರಶಾಂತ ಯಾದವಾಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅಡಿವೆಪ್ಪ ಕುರಿ ಸಂಗೀತ ಸೇವೆ ನೀಡಿದರು. ಶಿಕ್ಷಕ ವೈ.ಟಿ.ಹೆಬ್ಬಳ್ಳಿ ಸ್ವಾಗತಿಸಿದರು. ಜೀವರಾಜ ಛತ್ರದ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.