ಬಸವನಬಾಗೇವಾಡಿ: ‘ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವುದರ ಜೊತೆಗೆ ರಾಷ್ಟ್ರೀಯ ಭಾವೈಕ್ಯ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ’ ಎಂದು ಭಾರತ ಸೇವಾದಲದ ತಾಲ್ಲೂಕು ಸಮಿತಿಯ ಖಜಾಂಚಿ ವಿ.ಬಿ. ಮರ್ತೂರ ಹೇಳಿದರು.
ಪಟ್ಟಣದ ಬಸವತತ್ವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತ ಸೇವಾದಲದ ಮಿಲಾಪ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿ ನಡೆಯುವ ಭಯೋತ್ಪಾದನೆ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಭಾರತ ಸೇವಾದಲದಂತಹ ಸಂಸ್ಥೆಗಳು ಸಹಕಾರಿಯಾಗಿವೆ. ಸೇವಾದಲದಿಂದ ಶಿಸ್ತು, ಸಂಘಟನಾ ಸಾಮರ್ಥ್ಯದೊಂದಿಗೆ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಫ್.ಡಿ. ಮೇಟಿ ಮಾತನಾಡಿದ ಸೇವಾ ಮನೋಭಾವನೆಯಿಂದ ಎಲ್ಲರೂ ಕೆಲಸ ಮಾಡಲು ಮುಂದಾಗಬೇಕು. ಸೇವೆಗಾಗಿ ಬಾಳು ಎಂಬ ಮಂತ್ರವನ್ನು ಎಲ್ಲ ಶಿಕ್ಷಕರು ಪಠಿಸುತ್ತಾ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬಬೇಕು ಎಂದು ಹೇಳಿದರು.
ಎಸ್.ಬಿ. ಬಶೆಟ್ಟಿ, ಎಸ್.ಕೆ. ಸೋಮನಕಟ್ಟಿ, ಎಸ್.ಎ. ದೇಗಿನಾಳ, ಕೆ.ಬಿ.ಕಡೆಮನಿ ಮಾತನಾಡಿದರು. ಭಾರತ ಸೇವಾದಲದ ಜಿಲ್ಲಾ ಶಿಕ್ಷಣ ಬೋಧಕ ಸಿದ್ದಣ್ಣ ಯಳಸಂಗಿ ಪ್ರಾಸ್ತಾವಿಕ ಮಾತನಾಡಿದರು.
ಭಾರತ ಸೇವಾದಲದ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಆರ್.ಜಿ. ಅಳ್ಳಗಿ ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ ನಿರೂಪಿಸಿದರು. ಭಾರತ ಸೇವಾದಲದ ತಾಲ್ಲೂಕು ಸಮಿತಿ ಅಧಿನಾಯಕ ಎ.ಐ. ಮಠಪತಿ ವಂದಿಸಿದರು.