ನವದೆಹಲಿ (ಪಿಟಿಐ/ಐಎಎನ್ಎಸ್): ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಎಫ್ಐಆರ್ ಅಥವಾ ಆರೋಪಪಟ್ಟಿಯಲ್ಲಿ ಹೆಸರಿರದ ವ್ಯಕ್ತಿಯನ್ನೂ ಆರೋಪಿ ಎಂದು ಪರಿಗಣಿಸುವ ಅಧಿಕಾರ ಕೆಳ ಹಂತದ ನ್ಯಾಯಾಲಯಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಅಭಿಪ್ರಾ-ಯಪಟ್ಟಿದೆ.
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) 319ನೇ ಸೆಕ್ಷನ್ ಅಡಿ ನ್ಯಾಯಾಲಯ ಶಂಕಿತ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಿ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿದೆ.
ಒಂದು ವೇಳೆ ಪೊಲೀಸರು ಅಥವಾ ತನಿಖಾಧಿಕಾರಿಗಳು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ ವ್ಯಕ್ತಿಯ ಹೆಸರನ್ನು ಎಫ್ಐಆರ್ ಅಥವಾ ಆರೋಪಪಟ್ಟಿಯಲ್ಲಿ ಕೈಬಿಟ್ಟಿದ್ದರೂ, ಆ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸುವ ಮೊದಲು ಅವನ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿರಬೇಕು ಎಂದು ಪೀಠ ಹೇಳಿದೆ.
2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ಮೇಲೆ ಈ ಆದೇಶ ಪ್ರಭಾವ ಬೀರುವ ಸಾಧ್ಯತೆ ಇದೆ.
2ಜಿ ತರಂಗಾಂತರ ಹಗರಣದ ತನಿಖೆ ನಡೆಸಿದ್ದ ಸಿಬಿಐ, ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲವು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರನ್ನು ಎಫ್ಐಆರ್ ಅಥವಾ ಆರೋಪಪಟ್ಟಿಯಲ್ಲಿ ಹೆಸರಿಸಿರಲಿಲ್ಲ.
ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರು ಕಾರ್ಪೊರೇಟ್ ಸಂಸ್ಥೆಗಳ ದಿಗ್ಗಜರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.
ವಿಚಾರಣಾ ಹಂತದ ನ್ಯಾಯಾಲಯದ ಈ ಕ್ರಮವನ್ನು ಪ್ರಶ್ನಿಸಿ ಉದ್ಯಮಿಗಳು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದ್ದು ಇನ್ನೂ ತೀರ್ಪು ಹೊರಬಿದ್ದಿಲ್ಲ.