ನರಸಿಂಹರಾಜಪುರ: ಸಹಕಾರಿ ಕ್ಷೇತ್ರದಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರಗಳು ನೀಡುವ ಘೋಷಣೆಯಿಂದ ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸದೆ ಸಹಕಾರಿ ಸಂಘಗಳು ನಷ್ಟ ಅನುಭವಿಸುವಂತಾಗಿದೆ ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಕೆ.ಪಿ.ಸಂಪತ್ ಕುಮಾರ್ ತಿಳಿಸಿದರು.
ಇಲ್ಲಿನ ಕೃಷಿ ಭವನದಲ್ಲಿ ಶನಿವಾರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ರೈತರು ಸಕಾಲಕ್ಕೆ ಸಾಲ ಮರುಪಾವತಿಸದಿರುವುದರಿಂದ ಹಿಂದೆ ವಾರ್ಷಿಕ ₨ 2ಕೋಟಿವರೆಗೆ ಸಾಲವಿತರಿಸಿದ್ದ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಕೇವಲ ₨45.78ಲಕ್ಷ ಸಾಲ ವಿತರಿಸಿದೆ. ಸಾಲಕ್ಕಾಗಿ ಸಲ್ಲಿಸಿರುವ 300ಕ್ಕೂ ಅರ್ಜಿ ಬಾಕಿಯಿದೆ. ವರ್ಷದಲ್ಲಿ ಸಂಚಿತ ನಷ್ಟ ₨ 6.38 ಲಕ್ಷವಾಗಿದೆ. ಸಾಲಕಟ್ಟುವ ಸಾಮರ್ಥ್ಯ ಇದ್ದವರು ಕೂಡ ಸಾಲ ಮರುಪಾವತಿ ಮಾಡದಿರುವುದು ಬ್ಯಾಂಕ್ ನಷ್ಟ ಅನುಭವಿಸಲು ಪ್ರಮುಖ ಕಾರಣ. ಸಾಲವನ್ನು ಸಕಾಲಕ್ಕೆ ಪಾವತಿಸಿದರೆ ಮಾತ್ರ ಹೆಚ್ಚಿನ ಸಾಲ ನೀಡಲು ಸಾಧ್ಯವಾಗುತ್ತದೆ. ಸಾಲ ವಸೂಲಿ ಶೇ 51.57ರಷ್ಟಿದ್ದು ಹಿಂದಿನ ಸಾಲಿನ ವಸೂಲಾತಿಗಿಂತ ಕಡಿಮೆ ಇದೆ ಎಂದರು.
ವ್ಯವಸ್ಥಾಪಕ ಎಚ್.ಎ. ಪ್ರದ್ಯುಮ್ನ ಮಾಹಿತಿ ನೀಡಿ ಪ್ರಸಕ್ತ ಸಾಲಿನಲ್ಲಿ 100 ಹೊಸ ಸದಸ್ಯರನ್ನು ನೊಂದಾಯಿಸಿ ಕೊಂಡು ಷೇರು ಬಂಡವಾಳವನ್ನು ₨ 88 ಲಕ್ಷಗಳಿಗೆ ಹೆಚ್ಚಿಸುವ ಗುರಿ ಇದೆ. ಬ್ಯಾಂಕಿನಿಂದ ರೈತರಿಗೆ ವಿವಿಧ ಯೋಜನೆಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ₨ 75ಲಕ್ಷ ಸಾಲ ನೀಡುವ, ಸಾಲ ವಸೂಲಾತಿ ಶೇ 70ರಷ್ಟು ಹೆಚ್ಚಿಸುವ ಹಾಗೂ ಸದಸ್ಯರಿಂದ ₨ 50ಲಕ್ಷ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಬ್ಯಾಂಕಿನ ಸದಸ್ಯರ ಅನುಕೂಲಕ್ಕಾಗಿ ಇ–ಸ್ಟಾಂಪಿಂಗ್ (ಛಾಪ ಕಾಗದ) ವಿತರಿಸುವ ಯೋಜನೆ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ವೈ.ಎಸ್. ಸುಬ್ರಹ್ಮಣ್ಯ ಮಾತನಾಡಿ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುವವರಿಗೆ ಸೌಲಭ್ಯ ಸಿಗುವತ್ತ ಎಲ್ಲರೂ ಹೋರಾಟ ಮಾಡ ಬೇಕಾಗಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷೆ ಎಸ್.ಎಂ.ರಜನಿ ಸತ್ಯನ್, ನಿರ್ದೇಶಕರಾದ ಎನ್.ಜಿ.ನಾಗೇಶ್, ಬಿ.ಕೆ.ನಾರಾಯಣ ಸ್ವಾಮಿ, ಬಿ.ಪಿ.ಮೋಹನ್, ಎಸ್.ಎಸ್.ಶಾಂತಕುಮಾರ್, ಕೆ.ಆರ್.ಪ್ರಕಾಶ್, ಬಿ.ಎ.ಸತೀಶ್, ಚಂದ್ರಾವತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.