ಭಾಲ್ಕಿ: ರೈತರ ಸಹಕಾರದಿಂದ ನಡೆಯುವ ಸಕ್ಕರೆ ಕಾರ್ಖಾನೆಗಳಿಗೆ ರೈತರೇ ನಿಜವಾದ ಮಾಲೀಕರು ಎಂದು ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭೀಮಣ್ಣ ಖಂಡ್ರೆ ಹೇಳಿದರು.
ಭಾಲ್ಕಿ ಬಳಿಯ ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ನಡೆದ 22ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದರ ಜಿಲ್ಲೆಯ ರೈತರು 50 ವರ್ಷಗಳಿಂದ ಸಹಕಾರ ರಂಗದಲ್ಲಿ ಸೇವೆ ಸಲ್ಲಿಸಲು ನಮಗೆ ಬೆಂಬಲವಾಗಿ ನಿಂತಿದ್ದಾರೆ. ಅವರಿಂದ 2 ಬೃಹತ್ ಸಕ್ಕರೆ ಕಾರ್ಖಾನೆಗಳ ಸ್ಥಾಪನೆ ಸಾಧ್ಯವಾಗಿದೆ. ರೈತರ ಋಣ ಬಹಳ ದೊಡ್ಡದು
ಎಂದು ಅವರು ಹೇಳಿದರು.
2013– 14ನೇ ಹಂಗಾಮಿಗೆ 35,900 ಎಕರೆ ಕಬ್ಬು ನೋಂದಾಯಿಸಿಕೊಳ್ಳಲಾಗಿದೆ. ಕಬ್ಬಿನ ತಳಿ ಮತ್ತು ನೋಂದಾಯಿಸಿರುವ ರೈತರ ಜೇಷ್ಠತೆ ಆಧಾರದಲ್ಲಿ ಕಬ್ಬು ಸಾಗಣೆಗೆ ಕ್ರಮಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಕಾರ್ಖಾನೆ ಉಪಾಧ್ಯಕ್ಷ ಅಮರಕುಮಾರ ಖಂಡ್ರೆ, ಅಡಳಿತ ಮಂಡಳಿ ಸದಸ್ಯರಾದ ವೈಜ್ಯನಾಥ ಪಾಟೀಲ, ಸುಧಾಕರರಾವ ಪಾಟೀಲ, ಶಾಂತಪ್ಪ ಕಡಗಂಚಿ, ಬಾಬುರಾವ ತುಂಬಾ, ಮನೋಹರ ನಿಟ್ಟೂರೆ, ಜೈವಂತರಾವ ಪಾಟೀಲ, ಶಾಂತಕುಮಾರ ಪ್ರಭಾ, ಬಾಬುರಾವ ಪಾಟೀಲ ಹೊರಂಡಿ, ಶ್ರೀಪತರಾವ ಪಾಟೀಲ, ಶ್ರಾವಣಕುಮಾರ ಗಾಯಕವಾಡ, ಉಮೇಶ ಮಾಸಿಮಾಡೆ, ಫೀರೋಜ್, ವ್ಯವಸ್ಥಾಪಕ ನಿರ್ದೇಶಕ ಅರಳಿ ಸೂರ್ಯಕಾಂತ, ಕೆ.ಕೆ. ಅಟ್ಟಲ್ ಇದ್ದರು. ಅಧೀಕ್ಷಕ ರಮೇಶ ಚಿದ್ರಿ ನಿರೂಪಿಸಿ, ವಂದಿಸಿದರು.