ನವದೆಹಲಿ: ‘ಎರಡು ತಿಂಗಳ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) 12 ಲಕ್ಷ ಸದಸ್ಯರು ₹3,360 ಕೋಟಿ ಮೊತ್ತವನ್ನು ಹಿಂದಕ್ಕೆ ಪಡೆದಿದ್ದಾರೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
‘ಕೋವಿಡ್–19‘ ಪಿಡುಗಿನ ಸಂದರ್ಭದಲ್ಲಿ ಎದುರಾಗುವ ಹಣಕಾಸಿನ ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಲು ಭವಿಷ್ಯ ನಿಧಿ ಖಾತೆಯಲ್ಲಿನ (ಪಿಎಫ್) ಹಣ ಹಿಂದೆ ಪಡೆಯಲು ಕಾರ್ಮಿಕ ಸಚಿವಾಲಯವು ವಿಶೇಷ ಸೌಲಭ್ಯ ಕಲ್ಪಿಸಿದೆ.
ಇದರಡಿ ಸದಸ್ಯರು ತಮ್ಮ ‘ಪಿಎಫ್’ ಖಾತೆಯಲ್ಲಿನ ಶೇ 75ರಷ್ಟು ಇಲ್ಲವೇ ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೂರು ತಿಂಗಳ ಮೊತ್ತದಲ್ಲಿ ಯಾವುದು ಕಡಿಮೆ ಇರುವುದೋ ಅದನ್ನು ಹಿಂದೆ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸದಸ್ಯರು ಈ ಮಿತಿಗಿಂತ ಕಡಿಮೆ ಮೊತ್ತಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ. ಹೀಗೆ ಪಡೆದ ಮೊತ್ತವನ್ನು ಪಿಎಫ್ ಖಾತೆಗೆ ಮರುಪಾವತಿಸುವ ಅಗತ್ಯ ಇರುವುದಿಲ್ಲ. ಈ ಮೊತ್ತಕ್ಕೆ ಆದಾಯ ತೆರಿಗೆಯೂ ಅನ್ವಯವಾಗುವುದಿಲ್ಲ. ಹಣ ಹಿಂದೆ ಪಡೆಯಲು ಸದಸ್ಯರು ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ.